ಬೀದರ್: ದಾಂಪತ್ಯ ಧರ್ಮ ಪಾಲನೆಯಿಂದ ಜೀವನ ಪ್ರೀತಿ, ಶಾಂತಿ ಹಾಗೂ ನೆಮ್ಮದಿ ಸಾಧ್ಯ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬಸವಕೇಂದ್ರದ ವತಿಯಿಂದ ಚನಶೆಟ್ಟಿ ಪರಿವಾರದ ವಚನಜ್ಯೋತಿ ನಾಗೇಶ ಅವರ ಕಲ್ಯಾಣ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಕಾವ್ಯ ಕುಂಚ ಗಾಯನ, ಜನಜಾಗೃತಿ ಹಾಗೂ ಮೇನಕಾ ಪಾಟೀಲ ರಚಿತ ಬಸವಪ್ರಿಯ ಡಾ. ಶಿವಾನಂದ ಮಹಾಸ್ವಾಮಿಗಳು ಹುಲಸೂರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮದುವೆಗೆ ಸಾಂಸ್ಕೃತಿಕ ಸ್ಪರ್ಶ ನೀಡಿ ಕೊರೊನಾ, ಕೃಷಿ, ಪರಿಸರ, ಮತದಾನ, ಆರೋಗ್ಯ ಮೊದಲಾದವುಗಳ ಮೂಡಿಸುತ್ತಿರುವುದು ಪ್ರಶಂಸನೀಯ ಎಂದರು.
ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ಮಾತನಾಡಿ, ‘ಜಗತ್ತಿನಲ್ಲಿ ಜಾತಿ, ಧರ್ಮ ಬೇರೆ ಬೇರೆಯಾದರೂ ಕುಟುಂಬ ಪ್ರೀತಿ ಒಂದೇ. ದಂಪತಿ ಪರಸ್ಪರ ಅರ್ಥಮಾಡಿಕೊಂಡು ಬದುಕಿದರೆ ಸುಖದ ನೆಲೆ ಕಾಣಬಹುದು ಎಂದು ನುಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ ಹುಲಸೂರ ಶ್ರೀ 22 ಸಾವಿರ ಕಿ.ಮೀ. ಪಾದಯಾತ್ರೆ ಮೂಲಕ ಬಸವ ಜ್ಯೋತಿ ಯಾತ್ರೆ ಕೈಗೊಂಡು ನಿಜ ಜಂಗಮತ್ವಕ್ಕೆ ಅರ್ಥ ತಂದು ಕೊಟ್ಟಿದ್ದಾರೆ ಎಂದರು.
ಲಿಂಗಾಯತ ಮಹಾ ಮಠದ ಅಕ್ಕ ಅನ್ನಪೂರ್ಣ ಮಾತನಾಡಿ,‘ ಬಸವಾದಿ ಶರಣರ ತತ್ವ ಸಿದ್ದಾಂತ ನಮ್ಮ ಎಲ್ಲ ಸಮಸ್ಯೆಗಳಿಗೆ ಸಿದ್ಧ ಔಷಧ ಇದ್ದಂತೆ ಎಂದು ಹೇಳಿದರು.
ಬಸವಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ಡಾ. ಗಂಗಾಂಬಿಕೆ ಅಕ್ಕ, ಉಮಾಕಾಂತ ಮುಸ್ತಾಪುರೆ ಕನಕಟ್ಟಾ, ಚಂದ್ರಶೇಖರ ಚನಶೆಟ್ಟಿ ಇದ್ದರು.
ಡಾ. ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಕಲ್ಯಾಣರಾವ್ ಚಳಕಾಪುರೆ ವಂದಿಸಿದರು.