ಬಸವಕಲ್ಯಾಣ: ಕೋವಿಡ್ ಕಾರಣ ವಾರಾಂತ್ಯ ಕರ್ಫ್ಯೂ ಘೋಷಿಸಿದ್ದರಿಂದ ಎರಡನೇ ದಿನ ಭಾನುವಾರವೂ ನಗರ ಹಾಗೂ ತಾಲ್ಲೂಕಿನ ಇತರೆಡೆ ಅಂಗಡಿ ಮುಂಗ್ಗಟ್ಟುಗಳು ಬಂದ್ ಇದ್ದವು. ಜನಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಔಷಧಿ ಅಂಗಡಿ, ಕಿರಾಣಾ ಹಾಗೂ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ಎಂದಿನಂತೆ ತೆರೆದಿದ್ದವು. ಆದರೆ, ವಾಹನಗಳ ಓಡಾಟವೂ ಅಷ್ಟಕಷ್ಟೇ ಇತ್ತು. ಹೋಟೆಲ್ಗಳಲ್ಲಿ ಉಪಾಹಾರ ಪಾರ್ಸೆಲ್ ಮೂಲಕ ಕೊಡಲಾಯಿತು. ಮಹಾರಾಷ್ಟ್ರದ ಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಂಡಕಾಪುರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಬಿಗಿಯಾಗಿತ್ತು. ಲಸಿಕೆ ಪಡೆದ ದಾಖಲೆ ಹಾಗೂ ಕೋವಿಡ್ ವರದಿ ಇಲ್ಲದಿದ್ದರೆ ಅಂಥವರನ್ನು ವಾಪಸ್ ಕಳುಹಿಸಲಾಯಿತು.
ಹುಮನಾಬಾದ್: ಭಾನುವಾರವೂ ಬಹುತೇಕ ಬಂದ್
ಹುಮನಾಬಾದ್: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೀರಿದ ವಾರಾಂತ್ಯ ಕರ್ಫ್ಯೂ ನಿಮಿತ್ಯ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆಯ ರಸ್ತೆಗಳಲ್ಲಿ ವಾಹನಗಳು ಓಡಾಡದೇ ಬಿಕೋ ಎನ್ನುತ್ತಿದ್ದೆವು. ಯಾವಾಗಲೂ ಜನಜಂಗುಳಿಯಿಂದ ಕೂಡಿರುತ್ತಿದ್ದ ಪಟ್ಟಣದ ಎಪಿಎಂಸಿ ಮಾರ್ಕೆಟ್, ಬಸ್ಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ರಾಮಚಂದ್ರ ವೃತ್ತ, ಹಳೇ ತಹಶೀಲ್ ಕಚೇರಿ, ಕಲ್ಲೂರು ರಸ್ತೆಗಳಲ್ಲಿ ವಾಹನ ಸಂಚಾರ ತೀರಾ ಕಡಿಮೆ ಇತ್ತು.
ಇನ್ನು ಕೆಲ ವಾಹನಗಳಿಗೆ ಪೊಲೀಸರು ತಡೆದು ವಿಚಾರಿಸಿದರು. ಭಾನುವಾರ ಬೆಳಿಗ್ಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳ್ಳಿಖೇಡ್ ಬಿ.ಹುಡಗಿ, ಹಳ್ಳಿಖೇಡ್ ಕೆ. ದುಬಲಗುಂಡಿ ಗ್ರಾಮಗಳಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದವೂ. ಗ್ರಾಮಗಳಲ್ಲಿ ಅಲ್ಲಲ್ಲಿ ಗುಂಪಾಗಿ ನಿಂತಿದ್ದಜನರು ಪೊಲೀಸರ ವಾಹನಗಳನ್ನು ನೋಡಿ ತಮ್ಮ ತಮ್ಮ ಮನೆಗಳಿಗೆ ಹೊರಟರು.
ಚಿಟಗುಪ್ಪ: ಹೆಚ್ಚಿದ ಪೊಲೀಸ್ ತಪಾಸಣೆ
ಚಿಟಗುಪ್ಪ: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಾರಾಂತ್ಯ ಕರ್ಫ್ಯೂ ವ್ಯವಸ್ಥಿತವಾಗಿ ಪಾಲನೆಯಾಗಲು ಪೊಲೀಸರು ಶನಿವಾರ ದಿನವಿಡೀ ಹೆಚ್ಚಿನ ಬೆವರು ಸುರಿಸಬೇಕಾಯಿತು. ಒಂದೆಡೆ ವೀಕೆಂಡ್ ಕರ್ಫ್ಯೂ ಘೋಷಿಸಿರುವ ಸರ್ಕಾರ ತರಕಾರಿ, ಹಣ್ಣು, ದಿನಸಿ ಸೇರಿದಂತೆ ಇತರೆ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಸಾರಿಗೆ ಸಂಸ್ಥೆಯ ಬಸ್ಸು, ಟ್ಯಾಕ್ಸಿ, ಆಟೊ ಸಂಚಾರಕ್ಕೂ ಅವಕಾಶ ಮಾಡಿಕೊಟ್ಟಿತ್ತು. ಹೋಟೆಲ್ಗಳಿಗೆ ಜನ ಬಂದು ಪಾರ್ಸೆಲ್ ಕೊಂಡೊಯ್ಯಲು ಅನುಮತಿ ನೀಡಿತ್ತು. ಈ ಎಲ್ಲ ಕಾರಣಗಳಿಂದ ಜನ ವಿವಿಧ ರೀತಿಯ ನೆಪವೊಡ್ಡಿ ದಿನವಿಡೀ ಬೇಕಾಬಿಟ್ಟಿ ಮನಬಂದಂತೆ ಸಂಚರಿಸಿದರು.
ಪಟ್ಟಣದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಮೇಲಿಂದ ಮೇಲೆ ಗಸ್ತು ತಿರುಗಿದರು. ಪ್ರತಿಯೊಬ್ಬರನ್ನೂ ತಡೆದು ವಿಚಾರಿಸುತ್ತಿದ್ದರು. ಆದರೆ, ಎಲ್ಲರೂ ಒಂದಿಲ್ಲೊಂದು ನೆಪವೊಡ್ಡಿ ನುಣುಚಿಕೊಳ್ಳುತ್ತಿದ್ದರು. ಪೊಲೀಸರು ಕೂಡ ಏನೂ ಮಾಡದ ಪರಿಸ್ಥಿತಿಯಲ್ಲಿದ್ದರು.
ಬೆಳಿಗ್ಗೆ ಜನ ಹಾಲು, ದಿನಪತ್ರಿಕೆ, ತರಕಾರಿ ಖರೀದಿಸುವ ನೆಪದಲ್ಲಿ ಹೊರಗೆ ಬಂದಿದ್ದರು. ಮಧ್ಯಾಹ್ನ 12ರಿಂದ ಸಂಜೆ 5ರ ವರೆಗೆ ಜನಸಂಚಾರ ವಿರಳವಾಗಿತ್ತು. ಸಂಜೆ ಆರರಿಂದ ರಾತ್ರಿ ಎಂಟು ಗಂಟೆಯ ವರೆಗೆ ಪುನಃ ಜನ ಬೇಕಾಬಿಟ್ಟಿ ಹೊರಗೆ ಸಂಚರಿಸಿದರು. ಕರ್ಫ್ಯೂ ಇಲ್ಲವೇನೋ ಎಂಬಂತಹ ಪರಿಸ್ಥಿತಿ ಇತ್ತು. ಆದರೆ, ಕೆಲವೆಡೆ ಹಾಗೂ ತಾಲ್ಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 65ರ ಮೇಲಿರುವ ಮಂಗಲಗಿ ಟೋಲ್ ಪ್ಲಾಜ್ ಮುಂದೆ ಪೊಲೀಸರು ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ದಂಡ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.