ಬೀದರ್: ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ.
ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಸೈಬರ್ ವಂಚನೆ ಪ್ರಕರಣಗಳ ಅಂಕಿ ಅಂಶಗಳ ಮೇಲೆ ಒಂದು ಸಲ ಕಣ್ಣಾಡಿಸಿದರೆ ಇದು ಸ್ಪಷ್ಟವಾಗುತ್ತದೆ.
ಮಕ್ಕಳ ಅಶ್ಲೀಲ ವಿಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುವುದು ಎಂದು ಪೋಷಕರಿಗೆ ಹೆದರಿಸಿ ಬ್ಲ್ಯಾಕ್ಮೇಲ್ ಮಾಡುವುದು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ.
2023ನೇ ಸಾಲಿನಲ್ಲಿ ಒಟ್ಟು 26 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ₹1.43 ಕೋಟಿ ವಂಚಿಸಲಾಗಿದೆ. ಇದರಲ್ಲಿ ₹51.83 ಲಕ್ಷ ಮರು ವಶಕ್ಕೆ ಪಡೆಯಲಾಗಿದೆ. ಒಟಿಪಿ ಮೂಲಕ ಮೂವರನ್ನು ವಂಚಿಸಿದರೆ, ಲಿಂಕ್ನಿಂದ ನಾಲ್ವರನ್ನು ಹಾಗೂ ಬಿಸಿನೆಸ್ಗೆ ಸಂಬಂಧಿಸಿದಂತೆ 8 ಜನರನ್ನು ವಂಚಿಸಲಾಗಿದೆ. ಮೂರು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2022ನೇ ಸಾಲಿನಲ್ಲಿ 16 ವಂಚನೆ ಪ್ರಕರಣಗಳು ದಾಖಲಾಗಿದ್ದವು. ಒಟ್ಟು ₹51.37 ಲಕ್ಷ ವಂಚನೆ ನಡೆದಿತ್ತು. ಇದರಲ್ಲಿ ₹7.63 ಲಕ್ಷ ಮರಳಿ ವಶಕ್ಕೆ ಪಡೆದು, ಮಾಲೀಕರಿಗೆ ಒಪ್ಪಿಸಲಾಗಿದೆ. 6 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನು, 2021ನೇ ಸಾಲಿನಲ್ಲಿ ಆರು ಜನ ವಂಚನೆಗೆ ಒಳಗಾಗಿದ್ದರು. ಅವರಿಂದ ₹6.79 ಲಕ್ಷ ವಂಚಿಸಲಾಗಿತ್ತು. 4 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ₹1.40 ಲಕ್ಷ ಮರಳಿ ವಶಕ್ಕೆ ಪಡೆದಿದ್ದಾರೆ.
4 ತಿಂಗಳಲ್ಲಿ 267 ದೂರು:
ಸೈಬರ್ ವಂಚನೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಆಗಸ್ಟ್ನಿಂದ ನವೆಂಬರ್ ತಿಂಗಳ ವರೆಗೆ ಜಿಲ್ಲೆಯಲ್ಲಿ 267 ದೂರುಗಳು ಸಲ್ಲಿಕೆಯಾಗಿದ್ದು, ₹33 ಲಕ್ಷ ವಂಚನೆ ನಡೆದಿದೆ. ಆಧಾರ್ ಬಯೊಮೆಟ್ರಿಕ್ ಬಳಸಿ ಹಣ ಲಪಟಾಯಿಸಲಾಗಿದೆ. ಎಲ್ಲಾದರೂ ಆಧಾರ್ ಬಯೊಮೆಟ್ರಿಕ್ ಬಳಸಿದರೆ, ಆ ಡೇಟಾ ಕದ್ದು ಅದರ ಮೂಲಕ ಹಣ ಡ್ರಾ ಮಾಡಲಾಗುತ್ತಿದೆ. ಇನ್ನು, ಲಿಂಕ್ ಅಕೌಂಟ್ ಹೆಸರಲ್ಲೂ ಬೇರೆಯವರ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಲಾಗುತ್ತಿದೆ. ಉದಾಹರಣೆಗೆ ಯಾವುದಾದರೂ ವ್ಯಕ್ತಿ ಹೆಸರಿನಲ್ಲಿ ಬ್ಯಾಂಕ್ ಖಾತೆಯಿದ್ದರೆ ಅದೇ ಖಾತೆಗೆ ಬೇರೆ ರಾಜ್ಯದಲ್ಲಿ ಇನ್ನೊಂದು ಖಾತೆ ತೆರೆದು ಲಿಂಕ್ ಮಾಡಿ, ಹಣ ಲಪಟಾಯಿಸುತ್ತಿರುವ ಪ್ರಕರಣಗಳು ವರದಿಯಾಗಿವೆ. ಇದರ ಮೇಲೆ ಬ್ಯಾಂಕಿನವರು ಹೆಚ್ಚು ನಿಗಾ ವಹಿಸಬೇಕು. ಕಠಿಣ ನಿಯಮಗಳನ್ನು ಜಾರಿಗೆ ತರಬೇಕೆಂಬ ಒತ್ತಾಯ ಗ್ರಾಹಕರಿಂದ ಕೇಳಿ ಬಂದಿವೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಂದ ನಂತರ ಸೈಬರ್ ಅಪರಾಧಗಳು ಇನ್ನಷ್ಟು ಹೆಚ್ಚಳವಾಗಿವೆ. ನಮ್ಮ ಧ್ವನಿ ಮಾರ್ಫಿಂಗ್ ಮಾಡಿ ಜನರನ್ನು ವಂಚಿಸಲಾಗುತ್ತಿದೆ. ತಂತ್ರಜ್ಞಾನವನ್ನು ಬಹಳ ಎಚ್ಚರದಿಂದ ಉಪಯೋಗಿಸಬೇಕು. ಮೊಬೈಲ್ಗೆ ಬರುವ ಎಲ್ಲ ಕರೆಗಳನ್ನು ನಂಬಬಾರದು=ಚನ್ನಬಸವಣ್ಣ ಎಸ್.ಎಲ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೀದರ್
ಬ್ಯಾಂಕ್ನವರು ಏನಂತಾರೆ?:
‘ಬ್ಯಾಂಕ್ ಕಡೆಯಿಂದ ಯಾವುದೇ ಕಾರಣಕ್ಕೂ ಒಟಿಪಿ ಆನ್ಲೈನ್ ಲಿಂಕ್ಗಾಗಿ ಕರೆ ಮಾಡುವುದಿಲ್ಲ. ಒಂದು ವೇಳೆ ನಿಮ್ಮ ಬ್ಯಾಂಕಿನ ಖಾತೆಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಯಿದ್ದಲ್ಲಿ ಕರೆ ಮಾಡಿ ಬ್ಯಾಂಕಿಗೆ ಬರುವಂತೆ ತಿಳಿಸಲಾಗುತ್ತದೆ ಹೊರತು ಯಾವ ಮಾಹಿತಿಯೂ ಮೊಬೈಲ್ ಕರೆ ಮೂಲಕ ಕೇಳುವುದಿಲ್ಲ. ಆದಕಾರಣ ಎಚ್ಚರದಿಂದ ಇರಬೇಕು’ ಎಂದು ಹೆಸರು ಹೇಳಲಿಚ್ಛಿಸದ ರಾಷ್ಟ್ರೀಯ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರು ತಿಳಿಸಿದರು.
ಬ್ಯಾಂಕಿನ ಅಧಿಕೃತ ಆ್ಯಪ್ಗಳನ್ನೇ ಉಪಯೋಗಿಸಬೇಕು. ಕಾಲಕಾಲಕ್ಕೆ ಪಾಸ್ವರ್ಡ್ ಬದಲಿಸಬೇಕು. ಕಠಿಣವಾದ ಪಾಸ್ವರ್ಡ್ ಇಡಬೇಕು. ಆನ್ಲೈನ್ ಸೆಂಟರ್ಗಳಲ್ಲಿ ಹಣ ವರ್ಗಾವಣೆ ಮಾಡಬಾರದು. ಎಲ್ಲೆಂದರಲ್ಲಿ ಬಯೋಮೆಟ್ರಿಕ್ ಕೊಡಬಾರದು. ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಕಸ್ಮಾತ್ ನಿಮಗೆ ಗೊತ್ತಿಲ್ಲದವರ ಖಾತೆ ಜಾಯಿಂಟ್ ಮಾಡಿದರೆ ತಕ್ಷಣವೇ ಬ್ಯಾಂಕಿನವರ ಗಮನಕ್ಕೆ ತರಬೇಕು. ಈ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಆದರೂ ಕೆಲವರು ಚಾಲಕಿಯಿಂದ ಕೃತ್ಯವೆಸಗುವ ಸಾಧ್ಯತೆ ಇರುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.