ಬಸವಕಲ್ಯಾಣ: ‘ದಲಿತರ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸುವುದು ಅಗತ್ಯವಾಗಿದೆ’ ಎಂದು ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹನುಮಂತ ಯಳಸಂಗಿ ಹೇಳಿದ್ದಾರೆ.
ನಗರದಲ್ಲಿ ದಲಿತ ಸೇನೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶೋಷಿತರ ಸರ್ವಾಂಗೀಣ ಅಭಿವೃದ್ಧಿಯ ಧ್ಯೇಯದಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಆದರೆ ಇಂದು ಅದರ ಬದಲಾವಣೆಯ ಹುನ್ನಾರ ನಡೆಯುತ್ತಿದೆ. ವಿದ್ಯೆ, ಉದ್ಯೋಗ ಇಲ್ಲದೆ ಅನೇಕರು ಬೀದಿ ಪಾಲಾಗುತ್ತಿದ್ದಾರೆ. ಭ್ರಷ್ಟಾಚಾರ ಹೆಚ್ಚಿದ್ದರಿಂದ ಸರ್ಕಾರದ ಸೌಲಭ್ಯಗಳು ಅರ್ಹರಿಗೆ ದೊರಕುತ್ತಿಲ್ಲ. ಆದ್ದರಿಂದ ಸಂಘಟನೆಯ ಪದಾಧಿಕಾರಿಗಳು ಬಡವರಿಗೆ, ದುರ್ಬಲರಿಗೆ ನೆರವು ನೀಡುವುದಕ್ಕೆ ಮುಂದಾಗಬೇಕು’ ಎಂದರು.
ಮುಖಂಡ ಸಿಕಂದರ್ ಶಿಂಧೆ ಮಾತನಾಡಿ, ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ ಧ್ಯೇಯವಾಗಬೇಕು. ಒಗ್ಗಟ್ಟಿನಿಂದ ಇದ್ದು ಶಕ್ತಿ ತೋರಿಸದಿದ್ದರೆ ಎಲ್ಲ ರೀತಿಯಿಂದಲೂ ಕಡೆಗಣಿಸಲಾಗುತ್ತದೆ. ಇಂಥ ಸಂಘಟನೆಗಳು ಹೆಚ್ಚೆಚ್ಚು ಕ್ರಿಯಾಶೀಲವಾಗಿ ಅನ್ಯಾಯ ಅನುಭವಿಸಿದವರ ಬೆಂಬಲಕ್ಕೆ ನಿಲ್ಲಬೇಕು’ ಎಂದರು. ಪ್ರಫುಲ್ ಆರ್.ಗಾಯಕವಾಡ ಮಾತನಾಡಿದರು.
ದಲಿತ ಸೇನೆಯ ಕಲಬುರಗಿ ವಿಭಾಗೀಯ ಅಧ್ಯಕ್ಷ ರಾಜೀವ ಲೇಂಗಟಿ, ಕಲಬುರಗಿ ನಗರ ಅಧ್ಯಕ್ಷ ಮಂಜುನಾಥ ಭಂಡಾರಿ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಶಿವಲಿಂಗಪ್ಪ ದೊಡ್ಮನಿ, ಮುಖಂಡರಾದ ಯುವರಾಜ ಭೆಂಡೆ, ಶ್ರೀಕಾಂತ ಕಾಂಬಳೆ, ರಾಜೀವ ಸೂರ್ಯವಂಶಿ, ಮನೋಜ ಖೇಲೆ, ಕಪಿಲ್ ವಾಲಿ, ವೀರಪ್ಪ ಧುಮ್ಮನಸೂರು ಉಪಸ್ಥಿತರಿದ್ದರು.
ದಲಿತ ಸೇನೆಗೆ ನೇಮಕ
ದಲಿತಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಪ್ರಫುಲ್ ಗಾಯಕವಾಡ ಹಾಗೂ ಬೀದರ್ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ಶ್ರೀಕಾಂತ ಕಾಂಬಳೆ ಮತ್ತು ವಿನೋದ ದಾದೆ ಅವರನ್ನು ನೇಮಿಸಲಾಯಿತು. ತಾಲ್ಲೂಕು ಘಟಕದ ಇತರೆ ಪದಾಧಿಕಾರಿಗಳನ್ನು ಸಹ ನೇಮಿಸಲಾಗಿದೆ. ಅರುಣ ಗಾಯಕವಾಡ ಸಾಗರ ರಾಯಗೋಳ (ಉಪಾಧ್ಯಕ್ಷ) ಪ್ರೀತಂ ಮದಲವಾಡಾ (ಪ್ರಧಾನ ಕಾರ್ಯದರ್ಶಿ) ಧನಂಜಯ ಗಾಯಕವಾಡ (ಕಾರ್ಯದರ್ಶಿ) ಮಹಾಂತೇಶ ಬಂದಗೆ (ಸಂಘಟನಾ ಕಾರ್ಯದರ್ಶಿ) ಅನಿಕೇತ ಕಾಂಬಳೆ (ಪ್ರಚಾರ ಪ್ರಮುಖ) ವಿಕ್ಕಿ ಕಾಂಬಳೆ (ಸಂಘಟಕರು) ಆದಿತ್ಯ ಮೋರಖಂಡಿಕರ್ ಗೋವಿಂದ ಸಾಳುಂಕೆ ದತ್ತಾತ್ರೇಯ ದೊರೆ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಎಲ್ಲ ಪದಾಧಿಕಾರಿಗಳ ಸನ್ಮಾನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.