ಬೀದರ್: ಕೊರೊನಾದಿಂದ ಶಾಲೆಗಳು ಮುಚ್ಚಿರುವ ಕಾರಣ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಆಹಾರಧಾನ್ಯಗಳನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಒತ್ತಾಯಿಸಿದೆ.
ಫೆಡರೇಷನ್ ಜಿಲ್ಲಾ ಘಟಕದ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ವೃತ್ತಿಪರ ಹಾಸ್ಟೆಲ್ಗಳನ್ನು ತೆರೆಯಬೇಕು. ಕ್ವಾರಂಟೈನ್ ಕೇಂದ್ರಗಳಾಗಿದ್ದ ಎಲ್ಲ ವಸತಿ ಶಾಲೆ ಹಾಗೂ ಹಾಸ್ಟೆಲ್ಗಳ ಸ್ಯಾನಿಟೈಸೇಷನ್ ಮಾಡಬೇಕು. ಬಾಕಿ ಇರುವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡಬೇಕು. ಆರ್ಟಿಇ ಅಡಿಯ ಆಯ್ಕೆಯಾಗಿ ಶಾಲೆಗಳಿಂದ ದೂರ ಉಳಿದ ವಿದ್ಯಾರ್ಥಿಗಳ ಕುರಿತು ತನಿಖೆ ನಡೆಸಬೇಕು. ಆರ್ಟಿಇ 9ನೇ ಹಾಗೂ 10ನೇ ತರಗತಿಗೂ ವಿಸ್ತರಿಸಬೇಕು. 2015 ರಲ್ಲಿ ನೇಮಕಗೊಂಡ ಪದವಿಪೂರ್ವ ಉಪನ್ಯಾಸಕರಿಗೆ ಕೂಡಲೇ ಆದೇಶ ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೋಡಗೆ, ಉಪಾಧ್ಯಕ್ಷ ಅಮರ ಗಾದಗಿ, ಕಾರ್ಯದರ್ಶಿ ಅವಿನಾಶ ಪಾಟೀಲ, ಸಾಯಿಪವನ್ ಪಚಂಗೆ, ಆಕಾಶ ಕೋಡಗೆ, ರೋಷನ್ ಮಲ್ಕಾಪುರೆ, ವಿಶಾಲ್ ಮಳಗಿ ಇದ್ದರು.