ಬೀದರ್: ‘ದೇಶದ ಭವಿಷ್ಯ ರೂಪಿಸುವ ಕಾರ್ಯವನ್ನು ಶಿಕ್ಷಣ ಕ್ಷೇತ್ರ ಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳು ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕರ್ನಾಟಕ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು..
‘ಶಿಕ್ಷಣದ ಮೂಲಕ ದೇಶಕ್ಕೆ ಶಕ್ತಿ ತುಂಬಲು ಸಾಧ್ಯವಿದೆ. 20 ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತಂತ್ರಜ್ಞಾನದ ಮೂಲಕ ಬೆರಳ ತುದಿಯಲ್ಲಿ ಸೇವೆ ಒದಗಿಸಲು ಅನುಕೂಲವಾಗಿದೆ’ ಎಂದು ತಿಳಿಸಿದರು.
‘ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಜ್ಞಾನದ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳುವಲ್ಲಿ ನೆರವಾಗಿದೆ. 2021–2022ಲ್ಲಿ ಮತ್ತೊಮ್ಮೆ ನ್ಯಾಕ್ ಎ+ ಮಾನ್ಯತೆ ಪಡೆದುಕೊಂಡರೆ ಸ್ವಾಯತ್ತ ಮಾನ್ಯತೆ ಕೊಡಲಾಗುವುದು’ ಎಂದು ಭರವಸೆ ನೀಡಲಾಗುವುದು.
‘ಗಡಿ ಭಾಗದ ಜನತೆ ಪ್ರತಿಭಾವಂತರು ಐದು ಭಾಷೆಗಳನ್ನು ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ. ಇಂತಹ ಪ್ರತಿಭೆಗಳನ್ನು ಬೆಳೆಸಿರುವ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಶುಭ ಹಾರೈಸಿದರು.
ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾತನಾಡಿದರು. ಕರಾಶಿ ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಬಂಡೆಪ್ಪ ಕಾಶಂಪೂರ್, ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಶಶಿಲ್ ನಮೋಶಿ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬುವಾಲಿ, ಕಲಬುರ್ಗಿಯ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಸಾಲಿಮಠ ಸಿ., ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಉಪಾಧ್ಯಕ್ಷ ಸಿದ್ದರಾಮ ಪಾರಾ, ಬಸವರಾಜ ಪಾಟೀಲ, ಮಹೇಶಕುಮಾರ ಭದಭದೆ, ರಾಜಶೇಖರ ತಾಂಡೂರ್, ಚಂದಾ ಶಾಂತಕುಮಾರ, ಡಿ.ವಿ.ಸಿಂದೋಲ್, ಎಂ.ಎ.ಶೇರಿಕಾರ, ಮಲ್ಲಿಕಾರ್ಜುನ ಹತ್ತಿ, ಶಿವಶಂಕರ ಶೆಟಕಾರ, ವಿಜಯಕುಮಾರ ಗುನ್ನಳ್ಳಿ, ವೀರಭದ್ರಪ್ಪ ಭುಯ್ಯಾ ಇದ್ದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಪ್ರಜಾವಾಣಿಯ ಹುಬ್ಬಳ್ಳಿ ಬ್ಯುರೊದ ಮುಖ್ಯಸ್ಥೆ ರಶ್ಮಿ ಎಸ್., ಯಾದಗಿರಿ ಡಿಎಚ್ಒ ಇಂದುಮತಿ ಪಾಟೀಲ, ಎಎಫ್ಎಸ್ ಅಧಿಕಾರಿ ಮನೋಜಕುಮಾರ, ಹಣಕಾಸು ಅಧಿಕಾರಿ ಲಕ್ಷ್ಮಣ ರಾಜನಾಳಕರ್, ಸಂಗೀತಕಾರ ರಾಜೇಂದ್ರಸಿಂಗ್ ಪವಾರ, ಸಾಫ್ಟವೆರ್ ಎಂಜಿನಿಯರ್ ಶ್ರೀಕಾಂತ ಮದಾಳೆ, ಸಂಜು ಹಿಂದೊಡ್ಡಿ ಹಾಗೂ ಪ್ರವೀಣ ಜೋಳಗಿಕರ್ ಅವರನ್ನು ಸನ್ಮಾನಿಸಲಾಯಿತು.
ಪ್ರೊ.ಮಲ್ಲಿಕಾರ್ಜುನ ಹಂಗರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ಬಸವರಾಜ ಜಾಬಶೆಟ್ಟಿ, ಸ್ವಾಗತಿಸಿದರು. ರಶ್ಮಿ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.