ಬೀದರ್: ‘ವಿದ್ಯಾರ್ಥಿಗಳು ಮೊಬೈಲ್ನಲ್ಲಿ ಹೆಚ್ಚು ಹರಟೆ ಹೊಡೆದು ಸಮಯ ವ್ಯರ್ಥ ಮಾಡಿಕೊಳ್ಳಬಾರದು’ ಎಂದು ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯೆ ರಂಜನಾ ಪಾಟೀಲ ತಿಳಿಸಿದರು.
ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ ವಿದ್ಯಾರ್ಥಿನಿಯರಿಗೆ ನಗರದ ಅಕ್ಕಮಹಾದೇವಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸಮಯಪಾಲನೆ, ಶಿಸ್ತು ಮತ್ತು ಸಂಯಮ ಈ ಮೂರು ವಿದ್ಯಾರ್ಥಿಗಳಲ್ಲಿರಬೇಕು. ಕಾಲೇಜು, ಶಿಕ್ಷಕರು ಮತ್ತು ಪಠ್ಯಪುಸ್ತಕಗಳನ್ನು ಪ್ರೀತಿಯಿಂದ ಕಂಡಾಗ ಅಧ್ಯಯನ ಪರಿಪೂರ್ಣವಾಗುತ್ತದೆ. ಅನವಶ್ಯಕ ವಿಷಯಗಳನ್ನು ತಲೆಗೆ ಹಾಕಿಕೊಂಡು ಜೀವನಕ್ಕೆ ವಿಮುಖರಾಗಿ ಬದುಕಬಾರದು. ಏನಾದರೂ ಹೊಸದನ್ನು ಸಾಧಿಸಿ ತೋರಿಸುವ ಛಲ ಮತ್ತು ಗುರಿ ಇಟ್ಟುಕೊಂಡರೆ ವಿದ್ಯಾರ್ಥಿಗಳು ಸಾಧನೆಯ ಉತ್ತುಂಗ ಶಿಖರಕ್ಕೇರುತ್ತಾರೆ ಎಂದರು.
ವಿಜ್ಞಾನ ವಿಭಾಗದ ರಾಧಿಕಾ ಸಂಜೀವಕುಮಾರ (ಶೇ 89.66), ವಿಜಯಲಕ್ಷ್ಮಿ ಗೋರಕ (ಶೇ 89), ಕಲಾ ವಿಭಾಗದ ವಿಜಯಲಕ್ಷ್ಮಿ ಎ. (ಶೇ 85.66) ಕ್ರಮವಾಗಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಕ್ಕೆ ಸನ್ಮಾನಿಸಲಾಯಿತು.