ಬಸವಕಲ್ಯಾಣ: ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ಕಲ್ಮಲಕರ್ ಅವರ ಅಮಾನತು ಆದೇಶವನ್ನು ಹಿಂಪಡೆದು ಅವರನ್ನು ಇಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಮಾದಿಗ ದಂಡೋರ ಹೋರಾಟ ಸಮಿತಿಯಿಂದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವರಿಗೆ ಬರೆದ ಮನವಿಪತ್ರವನ್ನು ಮಂಗಳವಾರ ಇಲ್ಲಿನ ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಯಿತು.
ಶಾರದಾ ಅವರು ಪ್ರಾಮಾಣಿಕ ಅಧಿಕಾರಿ ಆಗಿದ್ದಾರೆ. ಸರ್ಕಾರದ ಯೋಜನೆಗಳ ಜಾರಿಗೆ ಸತತವಾಗಿ ಪ್ರಯತ್ನಿಸಿದ್ದಾರೆ. ಅವರ ಹಿತ ಸಹಿಸದ ಕೆಲವರು ಅವರನ್ನು ವಿನಾಕಾರಣ ಅಮಾನತುಗೊಳಿಸಿದ್ದಾರೆ. ಸಂಬಂಧಿತರು ಶೀಘ್ರ ಅವರ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಲಾಯಿತು.
ಮಾದಿಗ ದಂಡೋರ ಹೋರಾಟ ಸಮಿತಿ ಗೌರವ ಅಧ್ಯಕ್ಷ ಸಂಜೀವ ಸಂಗನೂರೆ, ನಗರಸಭೆ ಸದಸ್ಯ ಮಾರುತಿ ಲಾಡೆ, ಶಿರೋಮಣಿ ನೀಲನೋರ್, ಅಶೋಕ ಸಂಗನೂರೆ, ದತ್ತು ಬಿ. ಲಾಡೆ, ಮನೋಜ, ಮಹಾದೇವ ಭೆಂಡೆ ಹಾಗೂ ದೇವೇಂದ್ರ ಅಟ್ಟೂರ್ ಪಾಲ್ಗೊಂಡಿದ್ದರು.