ಬಸವಕಲ್ಯಾಣ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗಾಗಿ ಕಿರಿಯ ಎಂಜಿನಿಯರ್ ಕೇಳಿದ ಲಂಚವನ್ನು ಕೊಡಲು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ತಾಲ್ಲೂಕಿನ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ ಎರಡು ಎತ್ತುಗಳನ್ನು ತಂದರು.
‘ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಸಾಲಿನಲ್ಲಿ ನನ್ನ ಹೊಲದಲ್ಲಿ ನಾಲೆಗೆ ತಡೆಗೋಡೆ ನಿರ್ಮಿಸಲಾಗಿದೆ. ಇದಕ್ಕಾಗಿ ₹ 1 ಲಕ್ಷ ಮಂಜೂರು ಆಗಿತ್ತು. ಕೂಲಿ ಹಣದ ರೂಪದಲ್ಲಿ ₹ 55 ಸಾವಿರ ಪಾವತಿಯಾಗಿದ್ದು, ಇನ್ನುಳಿದ ₹ 45 ಸಾವಿರ ಸಾಮಗ್ರಿ ಖರೀದಿ ಹಣ ನೀಡಿರಲಿಲ್ಲ. ಅದರ ಪಾವತಿಗೆ ₹ 5 ಸಾವಿರ ಲಂಚದ ಕೇಳಲಾಗಿತ್ತು. ಹಣವಿಲ್ಲದ ಕಾರಣ ಎತ್ತುಗಳನ್ನು ತಂದೆ’ ಎಂದು ರೈತ ಪ್ರಶಾಂತ ಬಿರಾದಾರ ತಿಳಿಸಿದರು.
‘ರೈತನಿಗೆ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಕಿರಿಯ ಎಂಜಿನಿಯರ್ ಯಾರು ಎಂಬುದನ್ನು ರೈತ ಸ್ಪಷ್ಟವಾಗಿ ಹೇಳುತ್ತಿಲ್ಲ. 2019ರಲ್ಲಿ ಕಾಮಗಾರಿ ಆರಂಭವಾದಾಗ, ಆ ಹುದ್ದೆಯಲ್ಲಿ ಬೇರೆಯವರು ಇದ್ದರು.ಈಗ ಸೂರ್ಯಕಾಂತ ಎಂಬುವರು ಇದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ ಚವಾಣ್ ತಿಳಿಸಿದ್ದಾರೆ.
‘ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಸವಕಲ್ಯಾಣ ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಹಾಯಕ ಸೂರ್ಯಕಾಂತ ಪಾಟೀಲಗೆ ಸೇವೆಯಿಂದ ವಜಾಗೊಳಿಸಿ. ಹೊರ ಗುತ್ತಿಗೆ ಸೇವೆ ರದ್ದುಪಡಿಸಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.