ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ವೈದ್ಯಕೀಯ ವೆಚ್ಚ ಸರ್ಕಾರ ಭರಿಸಲಿ: ಈಶ್ವರ ಖಂಡ್ರೆ

ಆಂಧ್ರ ಮಾದರಿಯಲ್ಲಿ ರಾಜ್ಯದ ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆಗೆ ಆಗ್ರಹ
Last Updated 2 ಮೇ 2021, 7:16 IST
ಅಕ್ಷರ ಗಾತ್ರ

ಭಾಲ್ಕಿ: ‘ಆಂಧ್ರಪ್ರದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿತರ ವೈದ್ಯಕೀಯ ವೆಚ್ಚವನ್ನು ಆರೋಗ್ಯಶ್ರೀ ಯೋಜನೆ ಅಡಿಯಲ್ಲಿ ಅಲ್ಲಿನ ಸರ್ಕಾರವೇ ಭರಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕೋವಿಡ್ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಗಂಭೀರವಾಗಿರುವ ಸಾವಿರಾರು ರೋಗಿಗಳಿಗೆ ಆಸ್ಪತ್ರೆ ಸಿಗುತ್ತಿಲ್ಲ. ಸಿಕ್ಕರೂ ಆಕ್ಸಿಜನ್, ಹಾಸಿಗೆ ಸಿಗುತ್ತಿಲ್ಲ. ವೆಂಟಿಲೇಟರ್ ದೊರಕುತ್ತಿಲ್ಲ. ಐಸಿಯು ಲಭ್ಯವೇ ಇಲ್ಲ. ಈ ಪರಿಸ್ಥಿತಿ ಸುಧಾರಣೆ ಮಾಡಬೇಕು. ಈ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಹಗಲು ಲೂಟಿ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಎಚ್.ಆರ್.ಸಿ.ಟಿ. ಸ್ಕ್ಯಾನ್‌ಗೆ 5-6 ಸಾವಿರ ರೂಪಾಯಿ, ರೆಮಿಡಿಸಿವಿರ್ ಚುಚ್ಚುಮದ್ದಿಗೆ 15-20 ಸಾವಿರ ರೂಪಾಯಿ, ಆಕ್ಸಿಜನ್ ಬೆಡ್, ವೆಂಟಿಲೇಟರ್‌ಗೆ 20 -25 ಸಾವಿರಾರು ರೂಪಾಯಿ, ಇನ್ನು ಐಸಿಯುಗೆ ಲಕ್ಷಗಟ್ಟಲೆ ಬಿಲ್ ಮಾಡಲಾಗುತ್ತಿದೆ. 5-6 ದಿನಗಳ ಚಿಕಿತ್ಸೆಗೆ ₹8-10 ಲಕ್ಷ ಬಿಲ್ ಮಾಡುತ್ತಿದ್ದಾರೆ. ಇದರಿಂದ ಬಡ ಮತ್ತು ಮಧ್ಯಮವರ್ಗದವರು ನಲುಗಿ ಹೋಗುತ್ತಿದ್ದಾರೆ. ತಮ್ಮವರ ಪ್ರಾಣ ಉಳಿಸಲು ಸಾಲ ಮಾಡಿ ಖಾಸಗಿ ಆಸ್ಪತ್ರೆಗಳಿಗೆ ಹಣ ಪಾವತಿ ಮಾಡಿ, ಆ ಸಾಲ ತೀರಿಸಲು ಅವರು ಕನಿಷ್ಠ 4-5 ವರ್ಷ ಜೀವನ ಸವೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದ್ದಾರೆ.

‘ಎಷ್ಟೋ ಜನರು ಆಸ್ಪತ್ರೆ ವೆಚ್ಚಕ್ಕೆ ಹೆದರಿ ಹಾದಿ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಇದು ನಿಜಕ್ಕೂ ದುರ್ದೈವ. ಸರ್ಕಾರವೇ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಸಂಪೂರ್ಣ (ಕ್ಯಾಷ್ ಲೆಸ್) ವೆಚ್ಚ ಭರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಆಂಧ್ರಪ್ರದೇಶ ಸರ್ಕಾರ 1.33 ಲಕ್ಷ ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗಾಗಿ ₹309 ಕೋಟಿ ಭರಿಸಿದೆ. ನಮ್ಮ ರಾಜ್ಯ ಸರ್ಕಾರವೂ ಕೂಡಲೇ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿ ಗಳಿಗೆ ಉಚಿತ ಚಿಕಿತ್ಸೆಯ ಆದೇಶ ಹೊರಡಿಸಬೇಕು. ಇಲ್ಲವಾದರೆ ಎಲ್ಲ ಮುಗ್ಧ ಸೋಂಕಿತರ ಸಾವಿನ ಹೊಣೆಯನ್ನು ಸರ್ಕಾರವೇ ಹೊರಬೇಕಾ ಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT