ಬೀದರ್ ನಗರದಲ್ಲಿ ಅಬ್ಬರಿಸಿದ ಮಳೆ

ಬೀದರ್: ತಾಲ್ಲೂಕಿನಲ್ಲಿ ಮಂಗಳವಾರ ಒಂದು ಗಂಟೆ ಧಾರಾಕಾರ ಮಳೆ ಸುರಿದಿದೆ.
ನಗರದ ತಗ್ಗು ಪ್ರದೇಶದಲ್ಲಿರುವ ಸಿಎಂಸಿ ಕಾಲೊನಿ, ಕೆಇಬಿ ಕಾಲೊನಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು. ಜ್ಯೋತಿ ಕಾಲೊನಿಯಲ್ಲಿ ಗಟಾರು ಉಕ್ಕಿ ಹರಿದು ಮನೆಗಳಿಗೆ ನೀರು ನುಗ್ಗಿತು. ಮನೆಯವರು ಬಕೆಟ್ ಹಾಗೂ ವೈಪರ್ ಹಿಡಿದು ನೀರು ಹೊರಗೆ ಚೆಲ್ಲಬೇಕಾಯಿತು.
ಮೋಹನ್ ಮಾರ್ಕೆಟ್ನಲ್ಲಿ ಗಟಾರುಗಳು ಉಕ್ಕಿ ಹರಿದು ಹರಳಯ್ಯ ವೃತ್ತ ಹಾಗೂ ರೋಟರಿ ವೃತ್ತದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ವಾಹನಗಳ ಓಡಾಟ ಹಾಗೂ ಪಾದಚಾರಿಗಳ ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಉಂಟಾಯಿತು.
ಧಾರಾಕಾರವಾಗಿ ಸುರಿದ ಮಳೆಗೆ ಬೀದಿ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಬೇಕಾಯಿತು. ನಗರದಲ್ಲಿ ಒಳ ಚರಂಡಿ ನಿರ್ಮಾಣ ಕಾಮಗಾರಿ ಕಾರಣ ಕೆಇಬಿ ಮುಂದಿನ ರಸ್ತೆ ಕೆಸರು ಮಯವಾಗಿತ್ತು.
ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಧಗೆ ಇತ್ತು. ಮಧ್ಯಾಹ್ನ ಮೋಡಗಳು ಆವರಿಸಿ ಸಂಜೆ ವೇಳೆಗೆ ಮಳೆ ಸುರಿಯಿತು. ಬೀದರ್ ತಾಲ್ಲೂಕಿನ ಕೊಳಾರ, ಆಣದೂರ, ಚೌಳಿ, ಅಮಲಾಪುರ ಹಾಗೂ ಚಿಟ್ಟಾದಲ್ಲಿ ಸಾಧಾರಣ ಮಳೆಯಾಗಿದೆ. ಹುಲಸೂರು ತಾಲ್ಲೂಕಿನಲ್ಲಿ ಕೆಲ ಕಡೆ ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.