ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬದುಕಿನಲ್ಲಿ ಬೆಳಕು ಮೂಡಿಸದ ಹಬ್ಬ

ಜಿಲ್ಲೆಯಲ್ಲಿ 2,304 ಹೆಕ್ಟೇರ್‌ನಲ್ಲಿನ ₹3.25 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆ ಹಾನಿ
Last Updated 16 ನವೆಂಬರ್ 2020, 5:13 IST
ಅಕ್ಷರ ಗಾತ್ರ

ಬೀದರ್‌: ಸಕಾಲದಲ್ಲಿ ಮುಂಗಾರು ಆರಂಭವಾದಾಗ ಸಂತಸಗೊಂಡಿದ್ದ ಜಿಲ್ಲೆಯ ರೈತರು ಮುಂಗಾರು ಮುಗಿಯುವ ವೇಳೆಗೆ ಅತಿವೃಷ್ಟಿ ಯಿಂದ ಕೋಟ್ಯಂತರ ರೂಪಾಯಿ ನಷ್ಟ ಅನು ಭವಿಸಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕಾರಣ ರೈತರ ಮನೆಮನಗಳಲ್ಲಿ ದೀಪಾವಳಿಯ ಬೆಳಕು ಬೆಳಗಿಲ್ಲ. ಹೆಚ್ಚು ಆದಾಯ ತಂದು ಕೊಡುವ ಶುಂಠಿ, ಅರಿಸಿಣ ಬೇರುಗಳು ನೆಲದಲ್ಲೇ ಕೊಳೆತರೆ, ರಜನಿಗಂಧ, ಚೆಂಡು ಹೂವು ದೇವರ ಮುಡಿಗೇರುವ ಮೊದಲೇ ಗಿಡಗಳಿಂದ ಉರುಳಿಬಿದ್ದಿವೆ. ನುಗ್ಗೆ ನೆಲ್ಲಕ್ಕುರುಳಿದರೆ, ಈರುಳ್ಳಿ ರೈತರ ಕಣ್ಣಲ್ಲಿ ನೀರು ತರಿಸಿದೆ.

ಬೀದರ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ತೋಟಗಾರಿಕೆ ಬೆಳೆ ಹಾನಿಯಾದರೆ, ನಂತರದ ಸ್ಥಾನದಲ್ಲಿ ಬಸವಕಲ್ಯಾಣ ಇದೆ. ಹುಲಸೂರು ತಾಲ್ಲೂಕಿನಲ್ಲಿ ಕಡಿಮೆ ಬೆಳೆ ನಷ್ಟವಾಗಿದೆ. ರೈತರಿಗೆ ಭರ್ಜರಿ ಆದಾಯ ತಂದುಕೊಡುತ್ತಿದ್ದ ಟೊಮೆಟೊ, ಪಪ್ಪಾಯಿ ನೀರು ಪಾಲಾಗಿವೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಅತಿವೃಷ್ಟಿ ಬರೆ ಎಳೆದಿದೆ.

ಲಾಕ್‌ಡೌನ್ ಸಂದರ್ಭ ಸಮೃದ್ಧವಾಗಿ ಬೆಳೆದಿದ್ದ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಕಲ್ಲಂಗಡಿ ಹಾಳಾಗಿತ್ತು. ಟನ್‌ಗಟ್ಟಲೆ ಕಲ್ಲಂಗಡಿ ಹೊಲದಲ್ಲೇ ಕೊಳೆತಿತ್ತು. ಕೆಲ ರೈತರು ಕಣ್ಣೆದುರಲ್ಲೇ ಬೆಳೆ ಹಾಳಾಗುತ್ತಿರುವುದನ್ನು ಕಂಡು ನಗರ, ಪಟ್ಟಣ ಪ್ರದೇಶಕ್ಕೆ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಬಂದು ಮಾರಿದ್ದರು. ಇದಾದ ನಂತರ ಬಿದ್ದ ಅತಿವೃಷ್ಟಿಯ ಹೊಡೆತ ರೈತರನ್ನು ಆರ್ಥಿಕವಾಗಿ ಮೇಲೆ ಏಳದಂತೆ ಮಾಡಿದೆ.

ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

₹2.68 ಕೋಟಿ ಮೌಲ್ಯದ ಬೆಳೆ ನಷ್ಟ

ಜಿಲ್ಲೆಯಲ್ಲಿ ₹2.68 ಕೋಟಿ ಮೌಲ್ಯದ 1987 ಹೆಕ್ಟೇರ್‌ ಪ್ರದೇಶದಲ್ಲಿನ ಅಲ್ಪಾವಧಿ ಬೆಳೆ ಹಾಗೂ ₹57.09 ಲಕ್ಷ ಮೌಲ್ಯದ 317.2 ಹೆಕ್ಟೇರ್‌ ಪ್ರದೇಶದಲ್ಲಿನ ಬಹು ವಾರ್ಷಿಕ ಬೆಳೆ ಸೇರಿ ಒಟ್ಟು ₹3.25 ಕೋಟಿ ಮೌಲ್ಯದ ತೋಟಗಾರಿಕೆ ಬೆಳೆ ಹಾಳಾಗಿದೆ.

ಜಿಲ್ಲೆಯಲ್ಲಿ ಟೊಮೆಟೊ 352.60 ಹೆಕ್ಟೇರ್, ಮೆಣಸಿನಕಾಯಿ 183.4 ಹೆಕ್ಟೇರ್, ಬೆಂಡೆಕಾಯಿ 34 ಹೆಕ್ಟೇರ್, ಬದನೆಕಾಯಿ 59 ಹೆಕ್ಟೇರ್, ರಜನಿಗಂಧ 3 ಹೆಕ್ಟೇರ್, ಚೆಂಡು ಹೂವು 163.6 ಹೆಕ್ಟೇರ್, ಶುಂಠಿ 790 ಹೆಕ್ಟೇರ್, ಅರಿಸಿಣ 56 ಹೆಕ್ಟೇರ್, ಬಳ್ಳಿಯ ಮೇಲೆ ಬೆಳೆಯುವ ತರಕಾರಿ (ಹಿರೇಕಾಯಿ, ತೊಂಡೆಕಾಯಿ, ಹಾಗಲಕಾಯಿ, ಸೌತೆಕಾಯಿ, ಕುಂಬಳಕಾಯಿ) 70.4 ಹೆಕ್ಟೇರ್, ಎಲೆಕೋಸು 53 ಹೆಕ್ಟೇರ್, ಈರುಳ್ಳಿ 73.6 ಹೆಕ್ಟೇರ್, ಎಲೆಸೊಪ್ಪು 30 ಹೆಕ್ಟೇರ್, ದೊಡ್ಡ ಮೆಣಸಿನಕಾಯಿ 2 ಹೆಕ್ಟೇರ್, ಮಾವು 4 ಹೆಕ್ಟೇರ್, ಪೇರಲ 5 ಹೆಕ್ಟೇರ್, ಲಿಂಬೆ 7 ಹೆಕ್ಟೇರ್, ಬಾಳೆ 62.6, ಗುಲಾಬಿ ಹೂವು 9.2 ಹೆಕ್ಟೇರ್, ನುಗ್ಗೆ 25 ಹೆಕ್ಟೇರ್, ಪಪ್ಪಾಯಿ 203.4 ಹೆಕ್ಟೇರ್ ಹಾಗೂ ಕರಿಬೇವು 1 ಹೆಕ್ಟೇರ್ ಸೇರಿ 2,304.40 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಹಾಳಾಗಿದೆ.

‘ಅತಿವೃಷ್ಟಿಯಿಂದ ತೋಟಗಾರಿಕೆ ಬೆಳೆಗಳು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿ ರೈತರು ಸಂಕಷ್ಟದಲ್ಲಿದ್ದಾರೆ. ಬೇಸಿಗೆಯಲ್ಲಿ ಲಾಕ್‌ಡೌನ್‌, ಮುಂಗಾರಿನಲ್ಲಿ ಅತಿವೃಷ್ಟಿ ರೈತರ ಬೆನ್ನು ಮೂಳೆಯನ್ನೇ ಮುರಿದಿದೆ. ಸರ್ಕಾರ ನೆರವಿಗೆ ಬರಬೇಕಿದೆ’ ಎನ್ನುತ್ತಾರೆ ಬೀದರ್ ತಾಲ್ಲೂಕಿನ ಚಿಟ್ಟಾದ ರೈತ ಜಾಫರ್.

ಯಾವ ತಾಲ್ಲೂಕಿನಲ್ಲಿ ಎಷ್ಟು ಹಾನಿ?

ಔರಾದ್ ತಾಲ್ಲೂಕಿನಲ್ಲಿ 75 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೀಡಾಗಿದೆ. ಟೊಮೆಟೊ 15 ಹೆಕ್ಟೇರ್, ಮೆಣಸಿನಕಾಯಿ 15 ಹೆಕ್ಟೇರ್, ಬೆಂಡೆಕಾಯಿ 3 ಹೆಕ್ಟೇರ್, ಬದನೆಕಾಯಿ 17 ಹೆಕ್ಟೇರ್, ಈರುಳ್ಳಿ 11 ಹೆಕ್ಟೇರ್, ಮಾವು 4 ಹೆಕ್ಟೇರ್, ಪೇರಲ 5 ಹೆಕ್ಟೇರ್, ಗುಲಾಬಿ 2 ಹೆಕ್ಟೇರ್, ಪಪ್ಪಾಯಿ, ಕರಿಬೇವು, ಲಿಂಬೆ ತಲಾ 1 ಹೆಕ್ಟೇರ್ ಹಾಳಾಗಿದೆ.

ಕಮಲನಗರ:

ತಾಲ್ಲೂಕಿನಲ್ಲಿ 237 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಟೊಮೆಟೊ 14 ಹೆಕ್ಟೇರ್, ಮೆಣಸಿನಕಾಯಿ 25 ಹೆಕ್ಟೇರ್, ಬೆಂಡೆಕಾಯಿ 6 ಹೆಕ್ಟೇರ್, ಬದನೆಕಾಯಿ 9 ಹೆಕ್ಟೇರ್, ಚೆಂಡು ಹೂವು 12 ಹೆಕ್ಟೇರ್, ಶುಂಠಿ 50 ಹೆಕ್ಟೇರ್, ಅರಿಸಿಣ 25 ಹೆಕ್ಟೇರ್, ಬಳ್ಳಿಯ ಮೇಲೆ ಬೆಳೆಯುವ ತರಕಾರಿ 2 ಹೆಕ್ಟೇರ್, ಎಲೆಕೋಸು 1 ಹೆಕ್ಟೇರ್, ಈರುಳ್ಳಿ 27 ಹೆಕ್ಟೇರ್, ಮಾವು 4 ಹೆಕ್ಟೇರ್, ಪೇರಲ 5 ಹೆಕ್ಟೇರ್, ಲಿಂಬೆ 6 ಹೆಕ್ಟೇರ್, ಗುಲಾಬಿ ಹೂವು 4.4 ಹೆಕ್ಟೇರ್, ನುಗ್ಗೆ 12 ಹೆಕ್ಟೇರ್, ಪಪ್ಪಾಯಿ 12 ಹೆಕ್ಟೇರ್ ಹಾಳಾಗಿವೆ.

ಬೀದರ್:
ತಾಲ್ಲೂಕಿನಲ್ಲಿ 757 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಟೊಮೆಟೊ 80.8 ಹೆಕ್ಟೇರ್, ಮೆಣಸಿನಕಾಯಿ 15.4 ಹೆಕ್ಟೇರ್, ಬೆಂಡೆಕಾಯಿ 11 ಹೆಕ್ಟೇರ್, ಬದನೆಕಾಯಿ 3 ಹೆಕ್ಟೇರ್, ಚೆಂಡು ಹೂವು 34.6 ಹೆಕ್ಟೇರ್, ಶುಂಠಿ 434 ಹೆಕ್ಟೇರ್, ಅರಿಸಿಣ 20 ಹೆಕ್ಟೇರ್, ಬಳ್ಳಿಯ ಮೇಲೆ ಬೆಳೆಯುವ ತರಕಾರಿ 31 ಹೆಕ್ಟೇರ್, ಎಲೆಕೋಸು 5 ಹೆಕ್ಟೇರ್, ಈರುಳ್ಳಿ 1.6 ಹೆಕ್ಟೇರ್, ಬಾಳೆ 10 ಎಕರೆ, ಪಪ್ಪಾಯಿ 36.8 ಹೆಕ್ಟೇರ್ ಹಾಳಾಗಿದೆ.

ಭಾಲ್ಕಿ:
ತಾಲ್ಲೂಕಿನಲ್ಲಿ 369.80 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಟೊಮೆಟೊ 62 ಹೆಕ್ಟೇರ್, ಮೆಣಸಿನಕಾಯಿ 33 ಹೆಕ್ಟೇರ್, ಬೆಂಡೆಕಾಯಿ 13 ಹೆಕ್ಟೇರ್, ಬದನೆಕಾಯಿ 9 ಹೆಕ್ಟೇರ್, ರಜನಿಗಂಧ 3 ಹೆಕ್ಟೇರ್, ಚೆಂಡು ಹೂವು 66 ಹೆಕ್ಟೇರ್, ಗುಲಾಬಿ 2.8 ಹೆಕ್ಟೇರ್‌, ಶುಂಠಿ 92 ಹೆಕ್ಟೇರ್, ಅರಿಸಿಣ 6 ಹೆಕ್ಟೇರ್, ಡೊಣ ಮೆಣಸಿನಕಾಯಿ 2 ಹೆಕ್ಟೇರ್, ತರಕಾರಿ ಸೊಪ್ಪು 30 ಹೆಕ್ಟೇರ್, ಬಳ್ಳಿಯ ಮೇಲೆ ಬೆಳೆಯುವ ತರಕಾರಿ 5 ಹೆಕ್ಟೇರ್, ಬಾಳೆ 10 ಎಕರೆ, ಪಪ್ಪಾಯಿ 26 ಹೆಕ್ಟೇರ್ ನಷ್ಟವಾಗಿದೆ.

ಬಸವಕಲ್ಯಾಣ:
ತಾಲ್ಲೂಕಿನಲ್ಲಿ 440.20 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಟೊಮೆಟೊ 63 ಹೆಕ್ಟೇರ್, ಮೆಣಸಿನಕಾಯಿ 54 ಹೆಕ್ಟೇರ್, ಬೆಂಡೆಕಾಯಿ 1 ಹೆಕ್ಟೇರ್, ಬದನೆಕಾಯಿ 2 ಹೆಕ್ಟೇರ್, ಚೆಂಡು ಹೂವು 1 ಹೆಕ್ಟೇರ್, ಶುಂಠಿ 157 ಹೆಕ್ಟೇರ್, ಅರಿಸಿಣ 5 ಹೆಕ್ಟೇರ್, ಬಳ್ಳಿಯ ಮೇಲೆ ಬೆಳೆಯುವ ತರಕಾರಿ 2 ಹೆಕ್ಟೇರ್, ಎಲೆಕೋಸು 14, ಈರುಳ್ಳಿ 30 ಹೆಕ್ಟೇರ್, ಬಾಳೆ 42 ಎಕರೆ, ನಗ್ಗೆಕಾಯಿ 5 ಹೆಕ್ಟೇರ್, ಪಪ್ಪಾಯಿ 64.2 ಹೆಕ್ಟೇರ್ ಮಳೆಗೆ ಹಾಳಾಗಿದೆ.

ಹುಲಸೂರು:
ತಾಲ್ಲೂಕಿನಲ್ಲಿ 44 ಹೆಕ್ಟೇರ್ ತೋಟಗಾರಿಕೆ ಬೆಳೆ ನೀರು ಪಾಲಾಗಿದೆ. ಟೊಮೆಟೊ 25.8 ಹೆಕ್ಟೇರ್, ಮೆಣಸಿನಕಾಯಿ 3 ಹೆಕ್ಟೇರ್, ಶುಂಠಿ 4.8 ಹೆಕ್ಟೇರ್, ಬಳ್ಳಿಯ ಮೇಲೆ ಬೆಳೆಯುವ ತರಕಾರಿ 0.4 ಹೆಕ್ಟೇರ್, ಈರುಳ್ಳಿ 4 ಹೆಕ್ಟೇರ್, ಬಾಳೆ 0.6 ಎಕರೆ, ನಗ್ಗೆಕಾಯಿ 5 ಹೆಕ್ಟೇರ್ ಹಾಗೂ ಪಪ್ಪಾಯಿ 0.4 ಹೆಕ್ಟೇರ್ ನಷ್ಟವಾಗಿದೆ.

ಹುಮನಾಬಾದ್:
ತಾಲ್ಲೂಕಿನಲ್ಲಿ 188 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಟೊಮೆಟೊ 44.5 ಹೆಕ್ಟೇರ್, ಮೆಣಸಿನಕಾಯಿ 18 ಹೆಕ್ಟೇರ್, ಬದನೆಕಾಯಿ 9 ಹೆಕ್ಟೇರ್, ಚೆಂಡು ಹೂವು 28 ಹೆಕ್ಟೇರ್, ಶುಂಠಿ 22.5 ಹೆಕ್ಟೇರ್, ಬಳ್ಳಿಯ ಮೇಲೆ ಬೆಳೆಯುವ ತರಕಾರಿ 10 ಹೆಕ್ಟೇರ್, ಎಲೆಕೋಸು 11 ಮತ್ತು ಪಪ್ಪಾಯಿ 29 ಹೆಕ್ಟೇರ್ ಹಾಳಾಗಿದೆ.

ಚಿಟಗುಪ್ಪ:
ತಾಲ್ಲೂಕಿನಲ್ಲಿ 193 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಟೊಮೆಟೊ 35.5 ಹೆಕ್ಟೇರ್, ಮೆಣಸಿನಕಾಯಿ 20 ಹೆಕ್ಟೇರ್, ಬದನೆಕಾಯಿ 10 ಹೆಕ್ಟೇರ್, ಚೆಂಡು ಹೂವು 20 ಹೆಕ್ಟೇರ್, ಶುಂಠಿ 22.5 ಹೆಕ್ಟೇರ್, ಬಳ್ಳಿಯ ಮೇಲೆ ಬೆಳೆಯುವ ತರಕಾರಿ 20 ಹೆಕ್ಟೇರ್, ಎಲೆಕೋಸು 22, ನುಗ್ಗೆ 2 ಹೆಕ್ಟೇರ್, ಪಪ್ಪಾಯಿ 25 ಹೆಕ್ಟೇರ್ ಹಾನಿಗೀಡಾಗಿದೆ.

₹3.25 ಕೋಟಿ ಪರಿಹಾರ ಬಾಕಿ

ಬೀದರ್: ಸರ್ಕಾರ ಎನ್‌ಡಿಆರ್‌ಎಫ್‌ ಪ್ರಕಾರ ಪ್ರತಿ ಹೆಕ್ಟೇರ್‌ಗೆ ₹13 ಸಾವಿರ ನಿಗದಿಪಡಿಸಿದೆ. ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ವರದಿಯನ್ನು ಜಿಲ್ಲಾಡಳಿತದ ಮೂಲಕ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ವಿಶ್ವನಾಥ ಜೆ ಹೇಳುತ್ತಾರೆ.

1987 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ವಾರ್ಷಿಕ ಬೆಳೆಗೆ ₹2.68 ಕೋಟಿ ಹಾಗೂ 317 ಹೆಕ್ಷೇರ್‌ ಪ್ರದೇಶದಲ್ಲಿನ ಬಹು ವಾರ್ಷಿಕ ಬೆಳೆಗೆ ₹57 ಲಕ್ಷ ಸೇರಿ ರೈತರಿಗೆ ಒಟ್ಟು ₹3.25 ಕೋಟಿ ಪರಿಹಾರ ಕೊಡಬೇಕಿದೆ ಎಂದು ತಿಳಿಸುತ್ತಾರೆ.

‘ಒಂದು ಹೆಕ್ಟೇರ್‌ಗೆ ₹1.20 ಲಕ್ಷ ಆದಾಯ ಹಿಡಿದರೂ ಜಿಲ್ಲೆಯಲ್ಲಿ ಅಂದಾಜು ₹27 ಕೋಟಿ ಹಾನಿಯಾಗಿದೆ. ಉತ್ತಮ ಬೆಲೆ ದೊರಕಿದ್ದರೆ ಹಾನಿಯ ಪ್ರಮಾಣ ₹50 ಕೋಟಿ ದಾಟುತ್ತಿತ್ತು. ರೈತರು ಹಾನಿಯ ಕರಿ ನೆರಳಲ್ಲಿ ಹಬ್ಬದ ಆಚರಣೆ ಮಾಡುವಂತಾಗಿದೆ’ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT