ಬಸವಕಲ್ಯಾಣ (ಬೀದರ್ ಜಿಲ್ಲೆ): ‘ಬಸವಕಲ್ಯಾಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಯಿಂದ ₹10 ಕೋಟಿ ಪಡೆದಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್ ಆರೋಪಿಸಿದ್ದಾರೆ. ಅವರಿಗೆ ಅಲ್ಲಾನ ಮೇಲೆ ನಂಬಿಕೆ ಇದ್ದರೆ ಅದನ್ನು ಸಾಬೀತು ಮಾಡಲಿ’ ಎಂದು ಜೆಡಿಎಸ್ ಮುಖಂಡಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
‘ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದೆ ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆಯೇ ಹೊರತು ಬೇರೆ ಉದ್ದೇಶವಿಲ್ಲ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಈ ಕ್ಷೇತ್ರದಲ್ಲಿ 7 ಬಾರಿ ಜನತಾ ಪರಿವಾರದ ಅಭ್ಯರ್ಥಿ ಗೆದ್ದಿದ್ದು, ಇದು ಜೆಡಿಎಸ್ ಭದ್ರಕೋಟೆಯಾಗಿದೆ. ಈ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಕಾರಣಕ್ಕೆ ಒಂದು ವಾರ ಇಲ್ಲಿಯೇ ಠಿಕಾಣಿ ಹೂಡಲಿದ್ದೇನೆ’ ಎಂದರು.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕ್ಷೇತ್ರವನ್ನು ದತ್ತು ಪಡೆದು ಉದ್ಧಾರ ಮಾಡುವುದಾಗಿಸುಳ್ಳು ಭರವಸೆ ನೀಡಿದ್ದಾರೆ. ಚುನಾವಣೆ ಬಂದಾಗ, ಸ್ವರ್ಗ ಇಳಿಸುವೆ ಎನ್ನುವ ಅವರು ನಂತರ ಕ್ಷೇತ್ರವನ್ನೇ ಮರೆಯುತ್ತಾರೆ. ಈವರೆಗೆ ಉಪಚುನಾವಣೆ ನಡೆದ ಕ್ಷೇತ್ರಗಳಲ್ಲಿ, ಯಾವುದೇ ಕೆಲಸ ಮಾಡಿಲ್ಲ’ ಎಂದು ದೂರಿದರು.
‘ರಾಜ್ಯ ಸರ್ಕಾರ ದಿವಾಳಿಯತ್ತ ಸಾಗಿದೆ. ಯೋಜನೆಗಳಿಗೆ ನೀಡಲು ಹಣ ಇಲ್ಲ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಯಾದ ಯೋಜನೆಗಳ ಅನುದಾನವನ್ನಾದರೂ ಬಿಡುಗಡೆಗೊಳಿಸುವಂತೆ ಬಹುತೇಕ ಶಾಸಕರು ಕೋರುತ್ತಿದ್ದಾರೆ’ ಎಂದರು.
‘ರಾಜ್ಯದಾದ್ಯಂತ ಸಾರಿಗೆ ನೌಕರರು ಮುಷ್ಕರ ಹೂಡಿದ್ದು ಅವರಿಗೆ ವೇತನ ಹೆಚ್ಚಳವಾಗಬೇಕು ಎಂದು ನಾನೂ ಆಗ್ರಹಿಸುವೆ. ಆದರೂ ಸರ್ಕಾರ ಸ್ಪಂದಿಸುತ್ತಿಲ್ಲ. ವೇತನ ಹೆಚ್ಚಳಕ್ಕೆ ₹700 ಕೋಟಿ ಬೇಕಾಗಬಹುದು’ ಎಂದರು.
ಶಾಸಕ ಬಂಡೆಪ್ಪ ಕಾಶೆಂಪೂರ, ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೊಲಪುರ, ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್ ಇದ್ದರು.