ಬೀದರ್: ‘ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ನೀಚ ಮನಃಸ್ಥಿತಿ ಹೊಂದಿದ್ದಾರೆ. ಅವರಲ್ಲಿ ಬಿಜೆಪಿ ತತ್ವ, ಸಿದ್ಧಾಂತಗಳೇ ಇಲ್ಲ. ಏಕೆಂದರೆ ಅವರ ಕುಟುಂಬದವರು ಮೂಲತಃ ಕಾಂಗ್ರೆಸ್ಸಿಗರು. ಗೂಂಡಾಗಳನ್ನು ಇಟ್ಟುಕೊಂಡು ಎಲ್ಲೆಡೆ ಸುತ್ತಾಡುತ್ತಾರೆ. ಅವರಿಂದ ನನ್ನ ಜೀವಕ್ಕೂ ಅಪಾಯವಿದೆ’ ಎಂದು ಔರಾದ್ ಬಿಜೆಪಿ ಶಾಸಕ ಪ್ರಭು ಚವಾಣ್ ಸೋಮವಾರ ಆರೋಪಿಸಿದ್ದಾರೆ.
ಖೂಬಾ ನನ್ನ ವಿರುದ್ಧ ಸುಳ್ಳು, ಅರ್ಥಹೀನ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಕುರಿತು ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸಿ, ಅವರು ಒಪ್ಪಿಗೆ ನೀಡಿದರೆ ಖೂಬಾ ವಿರುದ್ಧ ₹200 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರಿಗಿಂತ ಅವರ ಪರಿವಾರದವರನ್ನು ಬೆಳೆಸುತ್ತಿದ್ದಾರೆ. ಅವರ ಪರಿವಾರದ ಗುತ್ತಿಗೆದಾರರನ್ನು ಇಲಾಖೆಗೊಬ್ಬರಂತೆ ನಿಯೋಜಿಸಿ ಹಣ ಗಳಿಸುತ್ತಿದ್ದಾರೆ. ಅವರು ತಪ್ಪು ಮಾಡಿ ನನ್ನ ಮೇಲೆ ಆರೋಪ ಹೊರಿಸುತ್ತಿರುವುದು ಸಹಿಸಲಾಗದು ಎಂದು ಎಚ್ಚರಿಕೆ ನೀಡಿದ್ದಾರೆ.