ಚಿಟಗುಪ್ಪ: ತಾಲ್ಲೂಕಿನ ವಿಠಲಪುರವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಜಿಯಾವುಲ್ಲ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕರವೇ ಪದಾಧಿಕಾರಿ ಮನೋಜ ಸಿತಾಳೆ ಮಾತನಾಡಿ,‘ವಿಠಲಪುರ ಗ್ರಾಮ ಹೋಬಳಿ ಕೇಂದ್ರ ಬೇಮಳಖೇಡಾದಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ಪ್ರತಿದಿನ ಸರ್ಕಾರಿ ಕೆಲಸಗಳಿಗೆ ಗ್ರಾಮಸ್ಥರು ಅಲ್ಲಿಗೆ ಹೋಗಬೇಕು. ಬಸ್ ಇಲ್ಲ. ನಡೆದುಕೊಂಡೇ ಹೋಗಬೇಕು.ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಸದ್ಯ ವಿಠಲಪುರ ಗ್ರಾಮದ ಜನಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಅದನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು’ ಎಂದು ತಿಳಿಸಿದರು.
ವಿಠಲಪುರವನ್ನು ಪಕ್ಕದ ಚಾಂಗಲೇರಾ, ಮಿನಕೇರಾ ಗ್ರಾಮ ಪಂಚಾಯಿತಿಗಳಿಗೆ ಒಳಪಡಿಸಿದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಮಹೇಶ ಮಲಗಿ, ಸಚಿನ್ ಹಾರ್ಗೆ, ಜಗನ್ನಾಥ ಕಪ್ಪರಗಾಂವ್, ವಿಜಯಕುಮಾರ್ ಯಾದವ, ಪಾಂಡು ಯಾದವ, ಹಣಮಂತ ಬುರ್ಜಿನ್ ಹಾಗೂ ವೆಂಕಟ ಯಾದವ ಇದ್ದರು.