ಬೀದರ್: ‘ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಒಂದು ವಾರದ ನಂತರ ಮತ್ತೆ ಬಿಜೆಪಿಗೆ ಬರ್ತಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಭರವಸೆ ವ್ಯಕ್ತಪಡಿಸಿದರು.
ಈಶ್ವರಪ್ಪ ಅವರು ನಮ್ಮ ಪಕ್ಷದ ಹಳೆಯ ಕಾರ್ಯಕರ್ತರು. ಅಯೋಧ್ಯೆ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕರ ಸೇವೆ ಮಾಡಿದ್ದರು ಎಂದು ನಗರದಲ್ಲಿ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಬಿಜೆಪಿ ಮುಖಂಡರಾದ ಕೆ.ಎಸ್. ಈಶ್ವರಪ್ಪ ಹಾಗೂ ಡಿ.ವಿ. ಸದಾನಂದಗೌಡ ಅವರು ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ಧ ಮಾಡಿರುವ ಗಂಭೀರ ಆರೋಪಗಳ ಕುರಿತು ಏನು ಹೇಳುವಿರಿ?’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಅದು ಅವರ ವೈಯಕ್ತಿಕ ಹೇಳಿಕೆ. ಈ ಕುರಿತು ಅವರನ್ನೇ ಕೇಳಿರಿ ಎಂದು ಜಾರಿಕೊಂಡರು.
ಕೆಆರ್ಪಿಪಿ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಅವರು ಸೋಮವಾರ (ಮಾ.25) ಬೆಂಗಳೂರಿನಲ್ಲಿ ಬಿಜೆಪಿ ಸೇರುವರು. ಸಂಸದರಾದ ಸುಮಲತಾ, ಕರಡಿ ಸಂಗಣ್ಣ ಅವರ ಜತೆ ಸಭೆ ನಿಗದಿಯಾಗಿದ್ದು, ಅವರ ಮನವೊಲಿಸುವೆ ಎಂದರು.
ಮೈತ್ರಿ ಧರ್ಮದಿಂದ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದೇವೆ. ಅವರಿಂದ ನಮಗೆ, ನಮ್ಮಿಂದ ಅವರಿಗೆ ಲಾಭವಾಗಲಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲ್ಲಲು ಸಹಾಯವಾಗಲಿದೆ ಎಂದು ಹೇಳಿದರು.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ಗೆ ಹೋಗಿರುವ ಸಿದ್ದರಾಮಯ್ಯನವರಿಗೆ ‘ಕಾಮನ್ ಸೆನ್ಸ್’ ಇಲ್ಲ. ದೇಶದ 12 ರಾಜ್ಯಗಳಲ್ಲಿ ಬರ ಇದೆ. ಎಲ್ಲೂ ಇದುವರೆಗೆ ಪರಿಹಾರ ಬಿಡುಗಡೆಗೊಳಿಸಿಲ್ಲ. ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆಗೊಳಿಸಬೇಕು. ರಾಜ್ಯ ಸರ್ಕಾರ ದಿವಾಳಿ ಆಗಿದೆ. ಅವರ ಬಳಿ ಹಣವೇ ಇಲ್ಲ. ಸರ್ಕಾರ ಪಾಪರ್ ಆಗದಿದ್ದರೆ ಹಣ ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದರು.
ಶಾಸಕರಾದ ಡಾ. ಸಿದ್ದಲಿಂಗಪ್ಪ ಪಾಟೀಲ, ಡಾ. ಅವಿನಾಶ ಜಾಧವ್, ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮುಖಂಡರಾದ ಪ್ರಕಾಶ ಖಂಡ್ರೆ, ಈಶ್ವರ ಸಿಂಗ್ ಠಾಕೂರ್, ಸುಭಾಷ ಗುತ್ತೇದಾರ್, ಎಂ.ಜಿ. ಮುಳೆ ಹಾಜರಿದ್ದರು.