ಭಾಲ್ಕಿ: ಖಾಸಗಿ ವೈದ್ಯರು ಗುಣಮಟ್ಟದ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಸಲಹೆ ನೀಡಿದರು.
ಇಲ್ಲಿನ ಉಪನ್ಯಾಸಕರ ಬಡಾವಣೆಯಲ್ಲಿರುವ ಅಷ್ಟೂರೆ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಖಾಸಗಿ ಕ್ಲಿನಿಕ್ ವೈದ್ಯರ ಮತ್ತು ಮೆಡಿಕಲ್ ಅಂಗಡಿ ಮಾಲೀಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್-19 ಕಣ್ಣಿಗೆ ಕಾಣದ ಹಾಗೆ ದೇಹ ಪ್ರವೇಶ ಮಾಡುತ್ತದೆ. ಜ್ವರ, ಕೆಮ್ಮು, ನೆಗಡಿ ಉಸಿರಾಟದ ತೊಂದರೆ ಕೊರೊನಾ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿದ್ದು, ಅಂತಹ ವ್ಯಕ್ತಿಗಳ ಗಂಟಲು ದ್ರವ ಮತ್ತು ರಕ್ತ ನಮೂನೆ ಪರೀಕ್ಷೆಗೆ ಕಳುಹಿಸಬೇಕು. ಕೊರೊನಾ ಸೋಂಕಿತ ವ್ಯಕ್ತಿ ಅಂದಾಜು 1,450 ಜನರಿಗೆ ಸೋಂಕು ಪಸರಿಸಬಹುದು. ಮುಂಜಾಗ್ರತೆ ವಹಿಸುವುದೇ ಕೊರೊನಾ ನಿಯಂತ್ರಣದ ದಿವ್ಯೌಷಧವಾಗಿದೆ. ವೈದ್ಯರು ಮತ್ತು ಮೆಡಿಕಲ್ ಶಾಪ್ ಮಾಲೀಕರು ಅಂತರ ಕಾಪಾಡಿ ವ್ಯವಹರಿಸಬೇಕು ಎಂದು ತಿಳಿಸಿದರು.
ಸಿಇಒ ಗ್ಯಾನೇಂದ್ರಕುಮಾರ ಗಂಗಾವರ, ಡಿಎಚ್ಒ ಡಾ.ವ್ಹಿ.ಜಿ.ರೆಡ್ಡಿ, ಜಿಲ್ಲಾ ಡ್ರಗ್ ಕಂಟ್ರೋಲರ್ ಎಡಿಸಿ ಹನುಮನಾಳ ಮಾತನಾಡಿ,‘ರಿಪೋರ್ಟಿಂಗ್, ಟೆಸ್ಟಿಂಗ್, ಐಸೋಲೆಟೆಡ್ ಮಾರ್ಗದಿಂದ ಹಾಗೂ ಸರ್ವರ ಸಹಕಾರದಿಂದ ಕೊರೊನಾ ವೈರಸ್ ಸುಲಭವಾಗಿ ನಿಯಂತ್ರಿಸಬಹುದು’ ಎಂದು ತಿಳಿಸಿದರು.
ತಾ.ಪಂ ಇಒ ಬಸವರಾಜ ನಾಯ್ಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರಗೂಡೆ, ಸಿಪಿಐ ರಮೇಶ ಮೈಲೂರಕರ್ ಹಾಗೂ ಪುರಸಭೆ ಅಧಿಕಾರಿ ಸ್ವಾಮಿದಾಸ ಇದ್ದರು.