ಬೀದರ್: ಮೊಬೈಲ್ ಯುವಕರಲ್ಲಿ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತಿದೆ ಎಂದು ಹುಮನಾಬಾದ್ ತಹಶೀಲ್ದಾರ್ ಪ್ರದೀಪ್ ಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಚಿಟಗುಪ್ಪ ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ನಡೆದ ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನ ಯುವ ಸಂಘಗಳ ಅಭಿವೃದ್ಧಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೊಬೈಲ್ ಸಂವಹನ, ಜ್ಞಾನ ವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು. ಮೊಬೈಲ್ನಲ್ಲಿ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಯುವಕರು ಅವುಗಳ ಲಾಭ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೊರಮೆ ಸಲಹೆ ಮಾಡಿದರು.
ಗ್ರಾಮಗಳಲ್ಲಿ ಸಮಾನ ಮನಸ್ಕ ಯುವಕರು ಸೇರಿ ಸಂಘಗಳನ್ನು ಕಟ್ಟಿಕೊಳ್ಳಬೇಕು. ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ನಾಯಕತ್ವ ಗುಣವನ್ನೂ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 18 ರಿಂದ 29 ವರ್ಷದ ಒಳಗಿನ ಯುವಕರು ಸೇರಿಕೊಂಡು ಯುವಕ ಸಂಘಗಳನ್ನು ರಚಿಸಬೇಕು. ಯುವಕ ಸಂಘ ರಚನೆಗೆ ಅಗತ್ಯ ಮಾಹಿತಿಗೆ ತಮ್ಮನ್ನು ಸಂಪರ್ಕಿಸಬಹುದು ಎಂದು ಚಿಟಗುಪ್ಪ ಮತ್ತು ಹುಮನಾಬಾದ್ ತಾಲ್ಲೂಕು ಎನ್ವೈವಿ ಲಕ್ಷ್ಮಣ ಪಿ. ಮಚಕುರೆ ತಿಳಿಸಿದರು.
ಚಿಟಗುಪ್ಪ ತಹಶೀಲ್ದಾರ್ ರವೀಂದ್ರ ದಾಮ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯೆ ಪದ್ಮಾವತಿ ಜವಳಿ ಉಪಸ್ಥಿತರಿದ್ದರು. ಭಗತ್ಸಿಂಗ್ ಯುವ ಕ್ರಾಂತಿ ಕಲಾವಿದರ ಸಂಘದ ಅಧ್ಯಕ್ಷೆ ಸಾರಿಕಾ ನಿರೂಪಿಸಿದರು.
ನೆಹರೂ ಯುವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನ ಗ್ರಾಮಗಳ ಯುವ ಸಂಘಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.