ಬೀದರ್: ’ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮುಖಂಡ ಗುರುನಾಥ ಜ್ಯಾಂತಿಕರ್ ಅವರಿಗೆ ಟಿಕೆಟ್ ನೀಡದೇ ಬಿಜೆಪಿ ಅನ್ಯಾಯವೆಸಗಿದೆ’ ಎಂದು ಸೌಹಾರ್ದ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ಆರೋಪಿಸಿದರು.
ಜ್ಯಾಂತಿಕರ್ ಅವರು 35 ವರ್ಷಗಳಿಂದ ಬಿಜೆಪಿ, ಆರ್ಎಸ್ಎಸ್, ಸಹಕಾರ ಭಾರತಿಯಲ್ಲಿ ನಿರಂತರವಾಗಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಅವರು ಸ್ವತಂತ್ರವಾಗಿ ಸ್ಪರ್ಧಿಸಬೇಕು. ಅವರು ಮನಸ್ಸು ಮಾಡಿದರೆ ಎಲ್ಲ ಸೌಹಾರ್ದ ಸಹಕಾರಿ ಸಂಘಗಳ ಪದಾಧಿಕಾರಿಗಳಿಂದ ಎಲ್ಲ ರೀತಿಯ ಸಹಕಾರ ಕೊಡಲಾಗುವುದು ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 58 ಸಾವಿರಕ್ಕೂ ಅಧಿಕ ಪದವೀಧರ ಮತದಾರರ ನೋಂದಣಿ ಮಾಡಿಸಲಾಗಿದೆ. ಇ-ಸ್ಟ್ಯಾಂಪ್, ಶಿಕ್ಷಕರ ವೇತನಕ್ಕಾಗಿ ಹೀಗೆ ಅನೇಕ ಹೋರಾಟದಲ್ಲಿ ಜ್ಯಾಂತಿಕರ್ ಪಾಲ್ಗೊಂಡಿದ್ದಾರೆ ಎಂದರು.
ಸೌಹಾರ್ದ ಸಹಕಾರಿ ಒಕ್ಕೂಟದ ಮುಖಂಡ ಜಗನ್ನಾಥ ಕರಂಜೆ ಮಾತನಾಡಿ, ಈಗಾಗಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಗುರುನಾಥ ಜ್ಯಾಂತಿಕರ್ ತಯಾರಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅವರು ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.