ಬೀದರ್: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಾ ರಶೀದ್ ಅಹಮ್ಮದ್ ಖಾದ್ರಿ ಅವರನ್ನು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರು ನಗರದಲ್ಲಿ ಗುರುವಾರ ಸನ್ಮಾನಿಸಿದರು.
ಖಾದ್ರಿ ಅವರ ಮನೆಗೆ ಭೇಟಿ ನೀಡಿದ ಸಚಿವರು ಹೂಮಾಲೆ ಹಾಕಿ, ಶಾಲು ಹೊದಿಸಿ ಗೌರವಿಸಿದರು.
ವಿಶ್ವಪ್ರಸಿದ್ಧ ವಿಶಿಷ್ಟ ಕಲೆಯಾಗಿರುವ ಬಿದ್ರಿ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ದಶಕಗಳಿಂದ ಎಲೆಮರೆ ಕಾಯಿಯಂತೆ ನಿರಂತರ ಶ್ರಮಿಸುತ್ತಿರುವ ಶಾ ರಶೀದ್ ಅಹಮ್ಮದ್ ಖಾದ್ರಿ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಇದು ಜಿಲ್ಲೆಯಷ್ಟೇ ಅಲ್ಲ, ರಾಜ್ಯಕ್ಕೇ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಬೀದರ್ ಜಿಲ್ಲೆ ಬಿದ್ರಿ ಕಲೆಗೆ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಈ ಕಲೆ ಉಳಿವಿಗೆ ಶ್ರಮಿಸುತ್ತಿರುವ ಶಾ ರಶೀದ್ ಅಹಮ್ಮದ್ ಖಾದ್ರಿ ಅವರ ಸೇವೆ ಮೆಚ್ಚುವಂಥದ್ದು. ಜಿಲ್ಲೆಗೆ ಸಂದಿರುವ ಪ್ರಶಸ್ತಿಯು ಬಿದ್ರಿ ಕುಶಲಕರ್ಮಿಗಳಿಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಖಾದ್ರಿ ಅವರ ಸೇವೆ ಮುಂದುವರಿಯಲಿ. ಇನ್ನಷ್ಟು ಉನ್ನತ ಗೌರವಗಳು ಅವರಿಗೆ ದೊರಕಲಿ ಎಂದು ಶುಭ ಹಾರೈಸಿದರು.
ಮುಖಂಡರಾದ ಅರಹಂತ ಸಾವಳೆ, ಎಂ.ಡಿ ಸಲಾವುದ್ದಿನ್, ರಾಮಶೆಟ್ಟಿ ಪನ್ನಾಳೆ, ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘೂಳೆ ಇದ್ದರು.