ಔರಾದ್: ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರಿನಲ್ಲಿ ಕೆಎಸ್ಆರ್ಪಿ ಕಾನ್ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿರುವ ತಾಲ್ಲೂಕಿನ ವಡಗಾಂವ್ (ದೇ) ಗ್ರಾಮದ ವೀರಭದ್ರಯ್ಯ ಮಠಪತಿ (25) ಕೋವಿಡ್ ಸೋಂಕಿತರೊಬ್ಬರಿಗೆ ಪ್ಲಾಸ್ಮಾ ದಾನ ಮಾಡುವ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
‘ಪ್ಲಾಸ್ಮಾ ಥೆರಪಿ ಕುರಿತು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದೆ. ಗುಣಮುಖರಾದವರು ತಮ್ಮ ರಕ್ತದಲ್ಲಿನ ಪ್ಲಾಸ್ಮಾ ಕೊಟ್ಟರೆ ಇತರೆ ಸೋಂಕಿತರು ಗುಣಮುಖ ಆಗುತ್ತಾರೆ ಎಂದು ಕೇಳಿದ್ದೆ. ಹೀಗಾಗಿ ನಾನು ಹಿಂದೆ–ಮುಂದೆ ನೋಡದೆ ನನ್ನ ಕೋವಿಡ್ ವರದಿ ನೆಗೆಟಿವ್ ಬಂದ ನಂತರ ಆಸ್ಪತ್ರೆಗೆ ಹೋಗಿ ಪ್ಮಾಸ್ಮಾ ದಾನ ಮಾಡಿದೆ’ ಎಂದು ಕಾನ್ಸ್ಟೆಬಲ್ ವೀರಭದ್ರಯ್ಯ ಮಠಪತಿ ಹೇಳುತ್ತಾರೆ.
‘ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಸಾಕಷ್ಟು ಜನ ಗುಣಮುಖರಾಗುತ್ತಿದ್ದಾರೆ. ರಾಜ್ಯದಲ್ಲೂ ಈ ರೀತಿ ಪ್ಲಾಸ್ಮಾ ದಾನ ಹೆಚ್ಚಾಗಬೇಕು. ಕೋವಿಡ್ನಿಂದ ಗುಣಮುಖರಾದವರು ಕಡ್ಡಾಯವಾಗಿ ಪ್ಲಾಸ್ಮಾ ದಾನ ಮಾಡಿದರೆ ಒಳ್ಳೆಯದು’ ಎಂದು ಅವರು ಅಭಿಪ್ರಾಯಪಡುತ್ತಾರೆ.
ವೀರಭದ್ರಯ್ಯ ಮಠಪತಿ ಅವರು ಪ್ಮಾಸ್ಮಾ ದಾನ ಮಾಡಿ ಇತರರಿಗೆ ಮಾದರಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ವಡಗಾಂವ್ ಗ್ರಾಮದ ವಾಣಿಜ್ಯ ತೆರಿಗೆ ಅಧಿಕಾರಿ ಖಾಜಾಖಲಿಲುಲ್ಲ, ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹಾಗೂ ಪಿಡಿಒ ಚಂದ್ರಕಾಂತ ಫುಲೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.