ಬೀದರ್: ‘ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳು ನೋಂದಣಿ ಮಾಡಿಸಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಚಂದ್ರಕಾಂತ ಶಹಾಬಾದಕರ ತಿಳಿಸಿದರು.
ನಗರದ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಭೆ ಉದ್ದೇಶಿಸಿ ಮಾತನಾಡಿದರು.
2024ರ ಮಾರ್ಚ್ನಲ್ಲಿ ದ್ವಿತೀಯ ಪಿಯು ಮೊದಲ ವಾರ್ಷಿಕ ಪರೀಕ್ಷೆ (ರೆಗ್ಯುಲರ್) ನಡೆಯಲಿದೆ. ವಿದ್ಯಾರ್ಥಿಗಳ ನೋಂದಣಿ ಮಾಹಿತಿಯನ್ನು ಮಂಡಳಿಯ ಪಿಯು ಪರೀಕ್ಷೆ ಪೋರ್ಟಲ್ನಲ್ಲಿ ಪ್ರಾಚಾರ್ಯರು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು ಎಂದು ಹೇಳಿದರು.
ಪ್ರಸಕ್ತ ಸಾಲಿನಿಂದ ಪಿಯು ಮೂರು ಪರೀಕ್ಷೆಗಳು ನಡೆಯಲಿವೆ. ಈ ಕುರಿತು ವಿದ್ಯಾರ್ಥಿಗಳು, ಅವರ ಪಾಲಕರಿಗೆ ಸೂಕ್ತ ಮಾಹಿತಿ ಕೊಡಬೇಕು. ಪರೀಕ್ಷೆಯಿಂದ ಯಾರು ವಂಚಿತರಾಗದಂತೆ ಪ್ರಾಚಾರ್ಯರು ವೈಯಕ್ತಿಕವಾಗಿ ನಿಗಾ ವಹಿಸಬೇಕು. ಪ್ರಾಚಾರ್ಯರು ರಿಸಿಪಿಯೆಂಟ್ ಐ.ಡಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ವಿವರಗಳನ್ನು ದೃಢೀಕರಿಸಿ ಇಲಾಖೆ ಕೇಳಿರುವ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಪ್ರಸ್ತುತ ಸಾಲಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಭಾಗ ಮಟ್ಟದಿಂದ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಸಂಬಂಧಿಸಿದ ಕಾಲೇಜಿನ ಪ್ರಾಚಾರ್ಯರು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಮನ್ಮಥ ಢೋಳೆ, ಸಂಘದ ರಾಜ್ಯ ಪ್ರತಿನಿಧಿ ಪ್ರಭು, ಉಪಾಧ್ಯಕ್ಷ ಚಂದ್ರಕಾಂತ ಗಂಗಶೆಟ್ಟಿ, ಪ್ರಾಚಾರ್ಯ ಮಂಗಲಾ, ಚಂದ್ರಕಾಂತ ಬಿರಾದಾರ ಇತರರಿದ್ದರು.