ಔರಾದ್: ತಾಲ್ಲೂಕಿನ ಬೋಂತಿ ತಾಂಡಾದಲ್ಲಿ ಶನಿವಾರ ತಾಂಡಾ ಅಭಿವೃದ್ಧಿ ನಿಗಮದ ಫಲಾನುಭವಿ ರೈತರಿಗೆ ಪಂಪಸೆಟ್ ಹಾಗೂ ಅದಕ್ಕೆ ಬೇಕಾಗುವ ಪೂರಕ ಸಾಮಗ್ರಿ ವಿತರಿಸಲಾಯಿತು.
ಶಾಸಕ ಪ್ರಭು ಚವಾಣ್ ಮಾತನಾಡಿ ರೈತರು ಸ್ವಾವಲಂಬಿ ಬದುಕು ಸಾಗಿಸಬೇಕು. ಅವರೂ ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ಸರ್ಕಾರದ ಖರ್ಚಿನಲ್ಲಿಯೇ ಅವರ ಹೊಲದಲ್ಲಿ ಕೊಳವೆ ಬಾವಿ ತೋಡಿಸಿ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಲಾಗುತ್ತದೆ.
ನಮ್ಮ ತಾಲ್ಲೂಕಿನಲ್ಲಿ ಅರ್ಹ ರೈತರನ್ನು ಗುರುತಿಸಿ ಅವರಿಗೆ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಏಳು ಜನ ಫಲಾನುವಿಗಳಿಗೆ ಪಂಪಸೆಟ್ ಸಾಮಗ್ರಿ ವಿತರಿಸಿದರು. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಎಂಜಿನಿಯರ್ ಅನೀಲ ರಾಠೋಡ್, ಸ್ಥಳೀಯ ಮುಖಂಡರು ಇದ್ದರು.
-----------