ಬೀದರ್: ಜಿಲ್ಲೆಯ ವಿವಿಧೆಡೆ ಗುರುವಾರ ರಾಮನವಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ರಾಮ ಮಂದಿರಗಳಲ್ಲಿ ವಿಶೇಷ ಪೂಜೆ, ಅರ್ಚನೆ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು
ನಗರದ ಪಾಪನಾಶ ದೇವಸ್ಥಾನ ಹತ್ತಿರದ ಶ್ರೀ ಸಮರ್ಥ ರಾಮ ಮಂದಿರದಲ್ಲಿ ಸಮರ್ಥ ಸೇವಾ ಮಂಡಳಿ ವತಿಯಿಂದ ಶ್ರೀರಾಮ ನವಮಿ ಮಹೋತ್ಸವ ಆಚರಿಸಲಾಯಿತು.
ಮಂದಿರದಲ್ಲಿ ತೊಟ್ಟಿಲ ಕಾರ್ಯಕ್ರಮ, ವಿಶೇಷ ಪೂಜೆ, ಅಂಲಕಾರ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿಯ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ರಾಮ ನವಮಿ ಹಾಗೂ ಭಾರತೀಯ ಶಿಕ್ಷಣ ಮಂಡಲದ ಸಂಸ್ಥಾಪನಾ ದಿನ ಸಂಭ್ರಮದಿಂದ ಆಚರಿಸಲಾಯಿತು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಮರ ಆಡಳಿತ ಮಾದರಿಯಾಗಿತ್ತು. ಅಂತೆಯೇ ಜನ ಇಂದಿಗೂ ರಾಮ ರಾಜ್ಯವನ್ನು ಸ್ಮರಿಸಿಕೊಳ್ಳುತ್ತಾರೆ. ರಾಮ ಹಾಗೂ ಆಂಜನೇಯರನ್ನು ನೆನೆದರೆ ಸಂಕಷ್ಟಗಳು ದೂರವಾಗುತ್ತವೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಎಲ್ಲರ ಸೌಭಾಗ್ಯ ಎಂದರು.
ವಿದ್ಯಾರಣ್ಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ, ರಾಮ ನವಮಿ ಆಚರಣೆ ಹಿನ್ನೆಲೆ ಕುರಿತು ಮಾತನಾಡಿದರು.
ಯುವ ಮುಖಂಡ ಅರುಣಕುಮಾರ ಹೋತಪೇಟ್, ಭಾರತೀಯ ಶಿಕ್ಷಣ ಮಂಡಲದ ಉಪಾಧ್ಯಕ್ಷ ಬಸವರಾಜ ಮೂಲಗೆ, ಕಾರ್ಯದರ್ಶಿ ಡಾ.ವೀರೇಶ ರಾಂಪುರೆ, ಡಾ. ಸಂತೋಷ ಮಲಶೆಟ್ಟಿ, ಈಶ್ವರ ಗುತ್ತಿ, ರಾಮಲಿಂಗ ಬಿ., ಅರುಣೋದಯ ಪ್ರೌಢಶಾಲೆ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ ಇದ್ದರು.
ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಸ್ವಾಗತಿಸಿದರು. ನೀಲಮ್ಮ ಗಜಲೆ ನಿರೂಪಿಸಿದರು. ಬಸವರಾಜ ಬಶೆಟ್ಟಿ ವಂದಿಸಿದರು.
ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾ ಘಟಕದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆ: ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ರಾಮನವಮಿ ಆಚರಿಸಲಾಯಿತು. ಶಾಲೆಯ ಶಿಕ್ಷಕ ಬಾಲಾಜಿ ರಾಠೋಡ್ ಮಾತನಾಡಿದರು.
ಮುಖ್ಯ ಶಿಕ್ಷಕಿ ಪ್ರತಿಭಾ ಚಾಮಾ ಹಾಗೂ ಶಿಕ್ಷಕ ಶಿವಪುತ್ರ ನೇಳಗೆ ಇದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಖುಶಾಲ ಕೋರೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.