‘ವರ್ತಕರ ವರ್ತನೆಗೆ ಬೇಸತ್ತು ರಾಜೀನಾಮೆ’

ಚಿಟಗುಪ್ಪ: ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿ ಏಕಾಏಕಿ ಮಾರುಕಟ್ಟೆ ಶುಲ್ಕವನ್ನು ಶೇ 35 ಪೈಸೆಯಿಂದ ₹1ಕ್ಕೆ ಹೆಚ್ಚಳ ಮಾಡಿರುವುದಕ್ಕೆ ಗುರವಾರ ಪಟ್ಟಣದ ಎಪಿಎಂಸಿ ವರ್ತಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ವರ್ತಕರ ಸಂಘದ ಅಧ್ಯಕ್ಷ ಗುಲಾಮ್ ಅವರು, ‘ಎಪಿಎಂಸಿ ಬಂದ್ ಮಾಡಲು ಸೂಚಿಸಿದ್ದರೂ ಬಹುತೇಕ ವರ್ತಕರು ಆದೇಶ ಪಾಲನೆ ಮಾಡದೇ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಿದ್ದಾರೆ. ಬಂದ್ಗೆ ಬೆಂಬಲ ಸೂಚಿಸದೇ ಇರುವುದರಿಂದ ಮತ್ತು ವರ್ತಕರ ನಕಾರಾತ್ಮಕ ವರ್ತನೆಗೆ ಬೇಸತ್ತು ಅಧ್ಯಕ್ಷ ಸ್ಥಾನಕ್ಕೆ ಸ್ವಯಂ ರಾಜೀನಾಮೆ ಘೋಷಣೆ ಮಾಡಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್ಕೆಸಿಸಿಐ), ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ ಕರೆ ನೀಡಿದ್ದ ಅನಿರ್ದಿಷ್ಟ ಅವಧಿಯವರೆಗಿನ ಎಪಿಎಂಸಿ ಬಂದ್ ಚಳವಳಿಗೆ ಇಲ್ಲಿಯ ಎಪಿಎಂಸಿ ವರ್ತಕರಿಗೆ ಅಂಗಡಿಗಳು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿಲು ವರ್ತಕರ ಸಂಘದ ಪದಾಧಿಕಾರಿಗಳು ಬೆಳಿಗ್ಗೆ ಸೂಚಿಸಿದ್ದರು. ಆದರೆ, ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಸಂಘದ ಕರೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿಲ್ಲ. ಕೆಲವು ಅಂಗಡಿಗಳು ಮುಚ್ಚಿದ್ದರೆ ಕೆಲವರು ಎಂದಿನಂತೆ ವಹಿವಾಟು ನಡೆಸಿದರು.
‘ಎಪಿಎಂಸಿ ತಿದ್ದುಪಡಿ ಕಾಯ್ದೆ ಅನುಸಾರ ಎಪಿಎಂಸಿ ಹೊರಗಡೆ ಮಾರಾಟ, ಖರೀದಿ ಮಾಡಿದ್ದಕ್ಕೆ ಯಾವುದೇ ಶುಲ್ಕವಿಲ್ಲ. ಆದರೆ, ಎಪಿಎಂಸಿ ಒಳಗಡೆ ಮಾರಾಟಕ್ಕೆ ಸೆಸ್ ಹೆಚ್ಚಿಸಲಾಗಿದೆ. ಶೇ ₹1.08 ಇದ್ದ ಸೆಸ್ ಅನ್ನು ಹಲವು ಬಾರಿ ಮನವಿ ಸಲ್ಲಿಸಿದ ಬಳಿಕ 35 ಪೈಸೆಗೆ ಇಳಿಸಲಾಗಿತ್ತು. ಈಗ ಏಕಾಏಕಿ ₹1ಗೆ ಹೆಚ್ಚಿಸಿರುವುದು ಮಾರಾಟಗಾರರಿಗೆ ಹೊರೆಯಾಗಿದೆ’ ಎಂದು ಜಗದೀಶ ಮೂಲಗೆ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.