ಬಸವಕಲ್ಯಾಣ: ಗುರುವಾರ ಇಡೀ ದಿನ ಮೋಡಕವಿದ ವಾತಾವರಣವಿತ್ತು. ಅಂಥದರಲ್ಲಿ ಆಗ ಸೂರ್ಯಗ್ರಹಣ ಗೋಚರಿಸಿತು. ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಈ ಸಮಯದಲ್ಲಿ ಬುಟ್ಟಿ, ತಟ್ಟೆ ಹಾಗೂ ಇತರೆ ಪಾತ್ರೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಒನಕೆ ನಿಲ್ಲಿಸಿದರು.
ಬೆಳಿಗ್ಗೆ 8.05 ಗಂಟೆಯಿಂದ 11.04 ಗಂಟೆಯವರೆಗೆ ಗ್ರಹಣವಿತ್ತು. ಮೋಡಗಳಲ್ಲಿ ಹೆಚ್ಚು ಬೆಳಕು ಇಲ್ಲದ್ದರಿಂದ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ.ಪಟ್ಟಣದಲ್ಲಿ ಎಲ್ಲಿಯೂ ಗ್ರಹಣ ನೋಡಲು ವಿಶೇಷ ಕನ್ನಡಕದ ವ್ಯವಸ್ಥೆ ಮಾಡಿರಲಿಲ್ಲ. ಆದ್ದರಿಂದ ಅನೇಕರು ಮೊಬೈಲ್ ಗಳ ಮೂಲಕ ಭಾವಚಿತ್ರ ತೆಗೆದು ನೋಡಿದರು.
ಗ್ರಹಣದ ಕಾಲದಲ್ಲಿ ಕೆಲವೆಡೆ ನೀರಿನಲ್ಲಿ ಒನಕೆ ನಿಲ್ಲಿಸಿರುವುದು ಕಂಡು ಬಂದಿತು. ಹಾರಕೂಡದ ಮಲ್ಲಿನಾಥ ಹಿರೇಮಠ ಅವರ ನಿವಾಸದಲ್ಲಿ ಒನಕೆ ನಿಲ್ಲಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬೆರಗಾದರು. ‘ಒನಕೆ ಗ್ರಹಣವಿದ್ದಾಗ ನಿಂತುಕೊಂಡಿತ್ತು ಅಂತ್ಯವಾದಾಗ ನೆಲಕ್ಕೆ ಬಿದ್ದುಬಿಟ್ಟಿತ್ತು’ ಎಂದು ಪ್ರತ್ಯಕ್ಷದರ್ಶಿ ಮಲ್ಲಿನಾಥ ಅವರು ತಿಳಿಸಿದರು.
`ಅತ್ಲಾಪುರದಲ್ಲಿ ಕಂಚಿನ ತಟ್ಟೆಯಲ್ಲಿ ಒನಕೆ ನಿಲ್ಲಿಸಿ ನೋಡಿದ್ದೇನೆ. ಪ್ರಯೋಗ ಯಶಸ್ವಿಯಾಯಿತು’ ಎಂದು ಜ್ಞಾನೇಶ್ವರ ರಾಚಪ್ಪನೋರ್ ಹೇಳಿದ್ದಾರೆ. ಮುಡಬಿಯ ಓಣಿಯೊಂದರಲ್ಲಿಯೂ ಹೀಗೆಯೇ ಒನಕೆ ನಿಲ್ಲಿಸಲಾಗಿತ್ತು.
ಗ್ರಹಣದ ಕಾರಣ ಅಂಗಡಿಗಳು ಮುಚ್ಚಿದ್ದವು. ವಾಹನಗಳು ರಸ್ತೆಗಳಿಲಿಲ್ಲ. ಎಲ್ಲವೂ ಬಂದ್ ಪರಿಸ್ಥಿತಿ ಇತ್ತು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೆಲ ಉಪನ್ಯಾಸಕರು ಗ್ರಹಣವಿದ್ದಾಗ ಬಸವೇಶ್ವರ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ಮೂಢನಂಬಿಕೆಗೆ ವಿರೋಧ ವ್ಯಕ್ತಪಡಿಸಿದರು.
ಪ್ರಾಚಾರ್ಯೆ ಮಾಯಾ ಮುರಾಳೆ ಸಸಿ ನೆಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರುದ್ರಮಣಿ ಮಠಪತಿ, ಡಾ.ಭೀಮಾಶಂಕರ ಬಿರಾದಾರ ಇದ್ದರು.