ಬೀದರ್: ಮುಂಗಾರಿನ ಆರಂಭದ ಹಬ್ಬ 'ಮಣ್ಣೆತ್ತಿನ ಅಮಾವಾಸ್ಯೆ’ ಪ್ರಯುಕ್ತ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರು ಶುಕ್ರವಾರ ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಪೂಜೆ ಮಾಡಿ್ರ ಸಮೃದ್ಧ ಬೆಳೆ ಬೆಳೆಯಲಿ ಎಂದು ಪ್ರಾರ್ಥಿಸಿದರು. ಊರ ದೇವರಿಗೆ ನೈವೇದ್ಯ ಸಮರ್ಪಿಸಿದರು.
ರೈತರು ಮನೆಯ ದನಕರುಗಳ ಮೈತೊಳೆದು ಕೋಡುಗಳಿಗೆ ರಿಬ್ಬನ್ ಹಾಗೂ ಬಲೂನ್ ಕಟ್ಟಿ ಸಿಂಗರಿಸಿದರು. ಕೆಲವರು ಮೈಮೇಲೆ ಗುಲಾಲು ಸವರಿ ಎತ್ತುಗಳಿಗೆ ಪ್ರೀತಿ ತೋರಿಸಿದರು.
ಹೊಲದಿಂದ ತಂದಿದ್ದ ಜಿಗಟು ಮಣ್ಣಿನಿಂದ ಜೋಡೆತ್ತುಗಳನ್ನು ತಯಾರಿಸಿ ಅವುಗಳಿಗೆ ಕುಂಕುಮ, ಅರಿಸಿಣದ ಬೊಟ್ಟು ಇಟ್ಟು ಕರ್ಪೂರ, ಊದುಬತ್ತಿ, ಲೋಬಾನ ಹಾಕಿ ಪೂಜೆ ಮಾಡಿದರು. ನಂತರ ಹೋಳಿಗೆ, ಅನ್ನ, ಪಲ್ಯದ ನೈವೇದ್ಯ ಸಮರ್ಪಿಸಿದರು.
ಕೆಲ ಗ್ರಾಮಗಳಲ್ಲಿ ರೈತರು ಸಿಂಗರಿಸಿದ ಎತ್ತುಗಳ ಮೆರವಣಿಗೆ ನಡೆಸಿದರು. ಮಹಿಳೆಯರು ಎತ್ತುಗಳಿಗೆ ದೂರದಿಂದ ಆರತಿ ಬೆಳಗಿ ಕೈಮುಗಿದರು. ನಂತರ ಕುಟುಂಬದ ಸದಸ್ಯರೆಲ್ಲ ಹೋಳಿಗೆ, ತುಪ್ಪ, ಅನ್ನ ಹಾಗೂ ಅಂಬರ ಸೇವಿಸಿದರು.