ಕಲಬುರ್ಗಿ: ಬೀದರ್ನ ಪರೀಕ್ಷಾ ಕೇಂದ್ರಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅವರು ಅಲ್ಲಿನ ಎಂ.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಿದರು.
ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಆಗಸ್ಟ್ 13ರಂದು ನಗರದ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿರುವ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹೊಸ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಯಿತು. ಪರೀಕ್ಷಾ ಕೇಂದ್ರಕ್ಕೆ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರನ್ನು ಆಂತರಿಕ ಮೇಲ್ವಿಚಾರಕರನ್ನಾಗಿ ಹಾಗೂ ಬಿವಿಬಿ ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ಬಾಹ್ಯ ಹಿರಿಯ ಮೇಲ್ವಿಚಾರಕರನ್ನಾಗಿ ನೇಮಕ ಮಾಡುವಂತೆ ಸ್ಥಳದಲ್ಲಿಯೇ ಆದೇಶ ನೀಡಿದರು.
ಅಲ್ಲದೇ, ಬೀದರ್ನ ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯದಲ್ಲಿಯೂ ಪರೀಕ್ಷಾ ಅಕ್ರಮ ನಡೆಯುತ್ತಿರುವುದನ್ನು ಗಮನಿಸಿದ ಪ್ರೊ. ಅಗಸರ ಅವರು, ಕಾಲೇಜು ಪ್ರಾಂಶುಪಾಲರು ಹಾಗೂ ಬಾಹ್ಯ ಹಿರಿಯ ಮೇಲ್ವಿಚಾರಕರಿಗೆ ಎಚ್ಚರಿಕೆ ನೀಡಿ ಲಿಖಿತ ವಿವರಣೆ ನೀಡುವಂತೆ ಸೂಚಿಸಿದರು.
ಮನ್ನಾಎಖ್ಖೆಳ್ಳಿಯ ಚಂದ್ರಶೇಖರ ಪದವಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಹ್ಯ ಹಿರಿಯ ಮೇಲ್ವಿಚಾರಕರು ಗೈರಾಗಿದ್ದನ್ನು ಗಮನಿಸಿ ಅವರನ್ನು ತಕ್ಷಣ ಮೇಲ್ವಿಚಾರಕರ ಜವಾಬ್ದಾರಿಯಿಂದ ಬಿಡುಗಡೆಗೊಳಿಸಲು ಸೂಚನೆ ನೀಡಿದರು.
ಇಬ್ಬರು ಡಿಬಾರ್: ಹುಮನಾಬಾದ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಮೊಬೈಲ್ ಬಳಸಿ ನಕಲು ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕುಲಪತಿ ಪ್ರೊ. ಅಗಸರ ಅವರು ಡಿಬಾರ್ ಮಾಡಿದರು.