ಬೀದರ್: ‘ವೈಶ್ವಿಕ ಮೌಲ್ಯಗಳನ್ನು ಜಗತ್ತಿನ ಪ್ರತಿಯೊಂದು ಜನಾಂಗದವರು ಎಲ್ಲ ಪರಿಸ್ಥಿತಿಗಳಲ್ಲಿ ಅವುಗಳನ್ನು ಸಾಮಾನ್ಯವಾಗಿ ಅಳವಡಿಸಿ ಕೊಂಡಿರುತ್ತಾರೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಕ್ಕ ಗಂಗಾಂಬಿಕೆ ಪಾಟೀಲ ನುಡಿದರು.
ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಆಯೋಜಿಸಿರುವ ವಚನ ವಿಜಯೋಜತ್ಸವದ ಎರಡನೇ ದಿನದ ಸಾಮೂಹಿಕ ಗ್ರಂಥ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಾಮಾಣಿಕತೆ, ಆದರ, ಜವಾಬ್ದಾರಿ, ಒಳ್ಳೆಯತನ, ಕಾಳಜಿ, ಸಹಕಾರ, ಧೈರ್ಯ, ನ್ಯಾಯ, ದಯೆ, ಸ್ವಕೃತಿ, ಒಗ್ಗಟ್ಟು ನಾಗರಿಕತೆ, ಶಾಂತಿ, ಪ್ರೇಮ, ಸೌಂದರ್ಯ, ಆನಂದ ಇತ್ಯಾದಿ ಅಂಶಗಳನ್ನು ಈ ತತ್ವಕ್ಕೆ ಹೊಂದಿಸಲಾಗಿದೆ. ಬಸವಾದಿ ಶರಣರ ವಚನಗಳು ವೈಶ್ವಿಕ ಮೌಲ್ಯಗಳ ಆಗರವೇ ಆಗಿವೆ’ ಎಂದು ತಿಳಿಸಿದರು.
ಅಕ್ಕ ಗಂಗಾಂಬಿಕೆ ಪಾಟೀಲ ನೇತೃತ್ವದಲ್ಲಿ ಶರಣ, ಶರಣೆಯರು ಹಾಗೂ ಮಕ್ಕಳು ಸಾಮೂಹಿಕವಾಗಿ ವಚನ ಗ್ರಂಥ ಪಠಣ ಮಾಡಿದರು.
ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ ಇದ್ದರು. ಶಿವಕುಮಾರ ಪಾಂಚಾಳ ವಚನ ಗಾಯನ ಮಾಡಿದರು.