ಬಸವಕಲ್ಯಾಣ: ‘ಮರಾಠಾ ಅಭಿವೃದ್ಧಿ ನಿಗಮಕ್ಕೆ ಶೀಘ್ರವೇ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಮಾಜಿ ಶಾಸಕ ಎಂ.ಜಿ.ಮುಳೆ ಸುಳ್ಳು ಹೇಳಿದ್ದಾರೆ. ಇದರ ಬಗ್ಗೆ ಸರ್ಕಾರವೇ ಸ್ಪಷ್ಟನೆ ನೀಡಲಿ’ ಎಂದು ಸಕಲ ಮರಾಠಾ ಕ್ರಾಂತಿ ಮೋರ್ಚಾ ಜಿಲ್ಲಾ ಸಂಚಾಲಕ ನಾರಾಯಣ ಗಣೇಶ ಆಗ್ರಹಿಸಿದ್ದಾರೆ.
ಎನ್ಸಿಪಿ ಅಭ್ಯರ್ಥಿಯಾಗಿ ನಾಮಪತ್ರ ಹಿಂಪಡೆದ ಕಾರಣ ಮಾಜಿ ಶಾಸಕ ಎಂ.ಜಿ.ಮುಳೆ ವಿರುದ್ಧ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮರಾಠಾ 2ಎ ಪ್ರವರ್ಗದಲ್ಲಿ ಸೇರ್ಪಡೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡುವುದು ಸೇರಿ 6 ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಈ ಕಾರಣಕ್ಕೆ ನಾಮಪತ್ರ ಹಿಂಪಡೆದಿರುವುದಾಗಿ ತಿಳಿಸಿರುವ ಮುಳೆ ಅವರು ಎನ್ಸಿಪಿಗೆ ದ್ರೋಹ ಬಗೆದಿದ್ದಾರೆ. ಅವರು ಬೇಕಾದರೆ ಬಿಜೆಪಿಯನ್ನು ಬೆಂಬಲಿಸಲಿ. ಆದರೆ, ಸಮಾಜದವರು ಅವರ ಹಿಂದೆ ಹೋಗುವುದಿಲ್ಲ. ಈ ಬಗ್ಗೆ ಶೀಘ್ರದಲ್ಲಿ ಸಭೆ ಆಯೋಜಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದರು.
ಜಿ.ಪಂ ಸದಸ್ಯ ಆನಂದ ಪಾಟೀಲ, ಅಂಗದರಾವ್ ಜಗತಾಪ, ಮಹಾದೇವ ಹಸೂರೆ, ಮಹೇಶ ಪಾಟೀಲ, ಸಂಭಾಜಿ ಬ್ರಿಗೇಡ್ ಜಿಲ್ಲಾ ಸಂಚಾಲಕ ಖಂಡೇರಾವ್ ರನವೆ, ತಾಲ್ಲೂಕು ಅಧ್ಯಕ್ಷ ಅಜಿಂಕ್ಯ ಮುಳೆ, ಬಾಲಾಜಿ ಸಾವಳೆ, ರಾಜಕುಮಾರ ಮಾತನಾಡಿದರು. ಎನ್.ಸಿ.ಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಭಾವು ಜಾಧವ ಉಪಸ್ಥಿತರಿದ್ದರು.