ಚಾಮರಾಜನಗರ: ಜಿಲ್ಲೆಯಲ್ಲಿರುವ 40 ಸಾವಿರಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಸೂರು– ಚಾಮರಾಜನಗರ ನಡುವಿನ ರೈಲು ಸಂಪರ್ಕ ಗುರುವಾರದಿಂದ ಸ್ಥಗಿತಗೊಂಡಿರುವುದು ಇವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಚಟುವಟಿಕೆಗಳು ಕಡಿಮೆ ಇರುವುದರಿಂದ ಜಿಲ್ಲೆಯ ಕಟ್ಟಡ ಕಾರ್ಮಿಕರು ಕೆಲಸಕ್ಕಾಗಿ ಹೊರ ಜಿಲ್ಲೆಗಳನ್ನೇ ಅವಲಂಬಿಸಿದ್ದರು. ಮಗ್ಗುಲಿನಲ್ಲೇ ಇರುವ ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಕಟ್ಟಡ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿರುವುದರಿಂದ ಸಹಜವಾಗಿ ಬಹುತೇಕ ಮಂದಿ ಮೈಸೂರಿನಲ್ಲಿ ಕೆಲಸ ಮಾಡಿ ನಿತ್ಯ ಜಿಲ್ಲೆಗೆ ವಾಪಸ್ಸಾಗುತ್ತಿದ್ದರು.
ಇದಕ್ಕಾಗಿ ಇವರು ಅಗ್ಗದ ಸಾರಿಗೆಯಾದ ರೈಲನ್ನೇ ತಮ್ಮ ಓಡಾಟಕ್ಕೆ ಅವಲಂಬಿಸಿದ್ದರು. ಲಾಕ್ಡೌನ್ಗೂ ಮುಂಚಿತವಾಗಿ ನಿತ್ಯ ಸಾವಿರಾರು ಮಂದಿ ರೈಲಿನಲ್ಲಿ ಮೈಸೂರಿಗೆ ಹೋಗಿ ಬರುತ್ತಿದ್ದರು. ಲಾಕ್ಡೌನ್ ಆದ ನಂತರವೂ ರೈಲುಗಳು ಹಾದು ಹೋಗುವ ಹಳ್ಳಿಗಳು ಹಾಗೂ ಸುತ್ತಮುತ್ತಲಿನ ಊರಿನ ಜನರು ರೈಲಿನಲ್ಲಿ ಮೈಸೂರಿನಲ್ಲಿ ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದ ಕಟ್ಟಡ ನಿರ್ಮಾಣ ಚಟುವಟಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಮೈಸೂರು ಚಾಮರಾಜನಗರ ರೈಲು ಸ್ಥಗಿತಗೊಂಡಿರುವುದು ಎಲ್ಲ ಕಟ್ಟಡ ಕಾರ್ಮಿಕರನ್ನು ಕೆಲಸ ಇಲ್ಲದೇ ಬರಿಗೈಯಲ್ಲಿ ಕೂರಬೇಕಾದ ಸ್ಥಿತಿಗೆ ದೂಡಿದೆ.
‘ರೈಲುಗಳು ಭರ್ತಿಯಾಗುತ್ತಿರಲಿಲ್ಲ. ಇದರಿಂದ ನಷ್ಟ ಉಂಟಾಗುತ್ತಿತ್ತು. ಹಾಗಾಗಿ, ರೈಲುಗಳನ್ನು ರದ್ದುಗೊಳಿಸಲಾಯಿತು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸುಲಭವಾಗಿ ಹೇಳುತ್ತಾರೆ. ಆದರೆ, ಈಗ ನೂರಾರು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನಷ್ಟವಾಗುತ್ತಿದೆ. ಇದಕ್ಕೆ ಯಾರು ಹೊಣೆ’ ಎಂದು ಕಾರ್ಮಿಕರ ಮಹದೇಶ್ ಕೇಳುತ್ತಾರೆ.
ಈಗ ಕಾರ್ಮಿಕರೆಲ್ಲರೂ ತಮ್ಮ ತಮ್ಮ ಹಳ್ಳಿಗಳಲ್ಲೇ ಇದ್ದಾರೆ. ಮುಂಗಾರು ಪೂರ್ವ ಮಳೆಯೂ ಸಮರ್ಪಕವಾಗಿ ಬೀಳದ ಕಾರಣ ಕೃಷಿ ಚಟುವಟಿಕೆಗಳೂ ನಿಂತಿವೆ. ರೈತರು, ಕೂಲಿ ಕಾರ್ಮಿಕರು ಇದೀಗ ಮುಗಿಲನ್ನೇ ಮಳೆಗಾಗಿ ದಿಟ್ಟಿಸುತ್ತಿದ್ದಾರೆ. ಒಂದಿಷ್ಟು ಮಳೆ ಬಿದ್ದರೆ ಕೃಷಿ ಚಟುವಟಿಕೆಗಳಲ್ಲಾದರೂ ತೊಡಗಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ.
ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯದಲ್ಲಿ 250 ಕಾರ್ಮಿಕರು
ಚಾಮರಾಜನಗರ ತಾಲ್ಲೂಕಿನ ಯಡಪುರ ಗ್ರಾಮದ ಸಮೀಪ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸುಮಾರು 250ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಅಲ್ಲಿಯೇ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು, ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಎಲ್ಲ ಬಗೆಯಲ್ಲೂ ಜಾಗೃತಿ ಮೂಡಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
***
ಜಿಲ್ಲೆಯಲ್ಲಿ ಸುಮಾರು 40 ಸಾವಿರ ಮಂದಿ ಕಟ್ಟಡ ಕಾರ್ಮಿಕರು ಇದ್ದಾರೆ. ಯಡಪುರದ ವೈದ್ಯಕೀಯ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ 250 ಮಂದಿ ತೊಡಗಿಕೊಂಡಿದ್ದಾರೆ.
-ಮಹದೇವಸ್ವಾಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.