ಚಾಮರಾಜನಗರ: ವಾಯುಪಡೆಯ ತರಬೇತಿ ವಿಮಾನ ಗುರುವಾರ ಪತನವಾದ ತಾಲ್ಲೂಕಿನ ಭೋಗಾಪುರ ಗ್ರಾಮ ಪಂಚಾಯಿತಿಯ ಸಪ್ಪಯ್ಯನಪುರಕ್ಕೆ ವಾಯುಪಡೆಯ ಹಿರಿಯ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ತನಿಖೆ ಕೈಗೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಕೂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ವಿಮಾನ ಅಪಘಾತಕ್ಕೀಡಾದ ಸ್ಥಳ, ವಿಮಾನದ ಅವಶೇಷಗಳು ಬಿದ್ದ ಸ್ಥಳಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ವಿಮಾನದ ಪ್ರಮುಖ ಬಿಡಿ ಭಾಗಗಳನ್ನು ತೆಗೆದುಕೊಂಡರು.
ತಾಂತ್ರಿಕ ಕಾರಣ ಇಲ್ಲವೇ ಮಾನವ ದೋಷದಿಂದಾಗಿ ಅಪಘಾತ ಸಂಭವಿಸಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ವಿಮಾನದ ಎಲ್ಲ ಅವಶೇಷಗಳನ್ನೂ ಸಂಗ್ರಹಿಸಿ, ಬೆಂಗಳೂರಿಗೆ ಕೊಂಡೊಯ್ಯಲಿರುವ ವಾಯುಪಡೆ, ಬಿಡಿ ಭಾಗಗಳನ್ನು ತಯಾರಿಸಿರುವ ಕಂಪನಿಗಳಿಗೇ ಅವುಗಳನ್ನು ಕಳುಹಿಸಿ ಅವುಗಳ ಬಗ್ಗೆ ಮಾಹಿತಿ ಪಡೆಯಲಿದೆ’ ಎಂದು ಗೊತ್ತಾಗಿದೆ.