ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: 3,627 ಹೆ. ಮೀಸಲು ಅರಣ್ಯ ಘೋಷಣೆ ನೆನೆಗುದಿಗೆ

Published 13 ಫೆಬ್ರುವರಿ 2024, 7:40 IST
Last Updated 13 ಫೆಬ್ರುವರಿ 2024, 7:40 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ಹಾಗೂ ಗುಂಡ್ಲುಪೇಟೆ ಬಫರ್‌ ವಲಯ ವ್ಯಾಪ್ತಿಯ ಕಾಡಂಚಿನ ಪ್ರದೇಶದ ಒಟ್ಟು 3,627.07 ಹೆಕ್ಟೇರ್‌ ಕಂದಾಯ ಜಮೀನನ್ನು 1963ರ ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್‌ 17ರ ಅಡಿ  ಮೀಸಲು ಅರಣ್ಯ ಎಂದು ಘೋಷಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. 

ಕುಂದುಕೆರೆ ವಲಯದಲ್ಲಿ 2,322.52 ಹೆಕ್ಟೇರ್‌ ಪ್ರದೇಶ ಹಾಗೂ ಗುಂಡ್ಲುಪೇಟೆ ಬಫರ್‌ ವಲಯದಲ್ಲಿ 1,306.55 ಹೆಕ್ಟೇರ್‌ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸುವ ಪ್ರಸ್ತಾವ ಕಂದಾಯ ಇಲಾಖೆಯ ಮುಂದಿದೆ. 

ಹಲವು ವರ್ಷಗಳಿಂದ ಬಾಕಿ: ಗುಂಡ್ಲುಪೇಟೆ ಬಫರ್‌ ವಲಯದಲ್ಲಿ 1,306.55 ಹೆಕ್ಟೇರ್‌ ಪ್ರದೇಶವನ್ನು ಮೀಸಲು ಅರಣ್ಯಕ್ಕಾಗಿ ಕಾಯ್ದಿರಿಸಿ (ಸೆಕ್ಷನ್‌ 4ರ ಅಡಿ) 1991ರಲ್ಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿ, ಕಾಯ್ದೆಯ ಸೆಕ್ಷನ್‌–5ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ ಪ್ರಕ್ರಿಯೆಗಳು (ಸೆಕ್ಷನ್‌-5 ರಿಂದ ಸೆಕ್ಷನ್‌ 17ರವರೆಗೆ ಮೀಸಲು ಅರಣ್ಯವಾಗಿ ಘೋಷಿಸಲು ಅಗತ್ಯವಿರುವ ಮೋಜಣೆ ಹಾಗೂ ನಕ್ಷೆ ತಯಾರಿಸುವುದು) ಬಾಕಿ ಇವೆ. 

ಕುಂದುಕೆರೆ ವಲಯದಲ್ಲಿ ಒಟ್ಟು ಮೀಸಲು ಅರಣ್ಯ ಘೋಷಣೆಗೆ 17 ಪ್ರಸ್ತಾವಗಳಿದ್ದು, ಈ ಪೈಕಿ ಎರಡು ಪ್ರಸ್ತಾವಗಳನ್ನು ಸೆಕ್ಷನ್‌ 17ರ ಅಡಿಯಲ್ಲಿ ಮೀಸಲು ಅರಣ್ಯ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಲು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇನ್ನೆರಡು ಪ್ರಸ್ತಾವಗಳನ್ನು ಕಾಯ್ದೆಯ ಸೆಕ್ಷನ್‌–5 ಅಡಿ ಅಧಿಸೂಚನೆ ಹೊರಡಿಸಲಾಗಿದೆ.

ಉಳಿದ 13 ಪ್ರಸ್ತಾವಗಳಲ್ಲಿ ಅರಣ್ಯ ಕಾಯ್ದೆಯ ಸೆಕ್ಷನ್‌ 4ರ ಅಡಿಯಲ್ಲಿ ಮೀಸಲು ಅರಣ್ಯ ಘೋಷಣೆಗಾಗಿ ಕಾಯ್ದಿರಿಸಿದ ಪ್ರದೇಶ ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಉಳಿದ ಪ್ರಕ್ರಿಯೆಗಳು ಅರಣ್ಯ ವ್ಯವಸ್ಥಾಪನಾ ಅಧಿಕಾರಿಯವರು (ಎಫ್‌ಎಸ್‌ಒ) ನಡೆಸಬೇಕಾಗಿದೆ.  

ಕುಂದುಕೆರೆ ವಲಯ ವ್ಯಾಪ್ತಿಯಲ್ಲಿ ಕೆಲವು ಪ್ರದೇಶಗಳನ್ನು 2002ರಲ್ಲೇ ಸೆಕ್ಷನ್‌–4ರ ಅಡಿ ಅಧಿಸೂಚನೆ ಹೊರಡಿಸಲಾಗಿದೆ. 2008, 2012ರಲ್ಲಿ ಅಧಿಸೂಚನೆ ಹೊರಡಿಸಲಾಗಿರುವ ಪ್ರದೇಶಗಳು ಕೂಡ ಮೀಸಲು ಅರಣ್ಯ ಘೋಷಣೆಗೆ ಬಾಕಿ ಇವೆ.  

ಎನ್‌ಟಿಸಿಎ ವರದಿಯಲ್ಲಿ ಉಲ್ಲೇಖ: ಮೀಸಲು ಅರಣ್ಯ ಘೋಷಣೆ ಬಾಕಿ ಇರುವ ವಿಚಾರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ವರದಿಯಲ್ಲೂ ಉಲ್ಲೇಖವಾಗಿದೆ. 

ವನ್ಯಜೀವಿ ಸಂರಕ್ಷಣವಾದಿ ಗಿರಿಧರ್‌ ಕುಲಕರ್ಣಿ ಅವರು ಈ ವಿಷಯವನ್ನು ಎನ್‌ಟಿಸಿಎ ಗಮನಕ್ಕೆ ತಂದಿದ್ದು, ಬೆಂಗಳೂರಿನ ಎನ್‌ಟಿಸಿಎ ಪ್ರಾದೇಶಿಕ ಕಚೇರಿಯ ಸಹಾಯಕ ಐಜಿಎಫ್‌ ಹರಿಣಿ ವೇಣುಗೋಪಾಲ್‌ ಅವರು ಈ ಬಗ್ಗೆ ಮಾಹಿತಿ ಕಲೆಹಾಕಿ ಪ್ರಾಧಿಕಾರದ ಕೇಂದ್ರ ಕಚೇರಿಗೆ ಕಳೆದ ವರ್ಷದ ನವೆಂಬರ್‌ 17ರಂದು ಸಲ್ಲಿಸಿರುವ ವರದಿಯಲ್ಲಿ, ಶೀಘ್ರದಲ್ಲಿ ಮೀಸಲು ಅರಣ್ಯ ಘೋಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದ್ದಾರೆ. 

1991ರಲ್ಲೇ ಪ್ರಾಥಮಿಕ ಅಧಿಸೂಚನೆ ವಿವಿಧ ಹಂತಗಳಲ್ಲಿ ಪ್ರಕ್ರಿಯೆಗಳು ಬಂಡೀಪುರಕ್ಕೆ ಹೊಂದಿಕೊಂಡ ಜಾಗ
ಮೀಸಲು ಅರಣ್ಯ ಘೋಷಣೆ ಪ್ರಕ್ರಿಯೆ ನಡೆಯುತ್ತಿದ್ದು ಈಗಿನ ವಸ್ತುಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು
ಸಿ.ಟಿ.ಶಿಲ್ಪಾನಾಗ್‌ ಜಿಲ್ಲಾಧಿಕಾರಿ
ಮೀಸಲು ಅರಣ್ಯವಾಗಿ ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಧಿಸೂಚನೆ ಶೀಘ್ರವಾದರೆ ನಮ್ಮ ಅರಣ್ಯದ ವ್ಯಾಪ್ತಿ ವಿಸ್ತಾರವಾಗಲಿದೆ
ಪಿ.ರಮೇಶ್‌ಕುಮಾರ್‌ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಬಂಡೀಪುರ ಮಾತ್ರವಲ್ಲ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುರುತಿಸಲಾಗಿರುವ ಪ್ರದೇಶಗಳನ್ನು ಶೀಘ್ರವಾಗಿ ಮೀಸಲು ಅರಣ್ಯವಾಗಿ ಘೋಷಿಸಬೇಕು
ಗಿರಿಧರ್‌ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ
ಸಂಘರ್ಷ ತಡೆಯಲು ಅರಣ್ಯ ವಿಸ್ತಾರ ಅಗತ್ಯ
ಬಂಡೀಪುರ ವ್ಯಾಪ್ತಿಯಲ್ಲಿ ಈಗ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಅವುಗಳಿಗೆ ಆವಾಸದ ಕೊರತೆ ಕಾಡಲು ಆರಂಭಿಸಿದೆ.  ಇತ್ತೀಚೆಗೆ ಎರಡರಿಂದ ನಾಲ್ಕು ವರ್ಷ ವಯಸ್ಸಿನ ಹುಲಿಗಳು ಕೂಡ ಕಾಡಿನಿಂದ ಹೊರಬಂದು ಆವಾಸ ಸ್ಥಾನ ಗುರುತಿಸಿಕೊಳ್ಳಲು ಬೇರೆ ಹುಲಿಗಳೊಂದಿಗೆ ಕಾದಾಡಿ ಮೃತಪಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.   ‘ಅರಣ್ಯದ ವ್ಯಾಪ್ತಿ ವಿಸ್ತರಿಸುವ ಅಗತ್ಯವಿದೆ. ಕಾಡಂಚಿನ ಪ್ರದೇಶಗಳಲ್ಲಿ ಖಾಲಿ ಬಿದ್ದಿರುವ ಕಂದಾಯ ಜಮೀನುಗಳನ್ನು ಗುರುತಿಸಿ ಮೀಸಲು ಅರಣ್ಯವಾಗಿ ಘೋಷಿಸಿದರೆ ವನ್ಯಜೀವಿಗಳಿಗೆ ಅನುಕೂಲವಾಗಲಿದೆ. ಇದರಿಂದ ಮಾನವ ವನ್ಯಜೀವಿ ಸಂಘರ್ಷ ತಡೆಯಬಹುದು’ ಎಂದು ಹೇಳುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ವನ್ಯಪ್ರೇಮಿಗಳು.   ‘2013ರ ಹೈಕೋರ್ಟ್‌ ಆದೇಶ ಪ್ರಕಾರ ಆನೆಗಳ ಆವಾಸಸ್ಥಾನಗಳಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್‌– 4 ಅಡಿ ಗುರುತಿಸಿರುವ ಎಲ್ಲ ಜಮೀನುಗಳನ್ನು ಸೆಕ್ಷನ್‌ 17ರ ಅಡಿ ಅಂತಿಮ ಅಧಿಸೂಚನೆ ಹೊರಡಿಸಲು ಕಂದಾಯ ಇಲಾಖೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಮೀಸಲು ಅರಣ್ಯ ಪ್ರದೇಶ ವಿಸ್ತರಣೆಯಾದರೆ ಮಾನವ– ಸಂಘರ್ಷ ತಡೆಯಲು ಸಹಕಾರಿಯಾಗಲಿದೆ’ ಎಂದು ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT