ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಕಾಂಗ್ರೆಸ್‌ ಬೆಂಬಲಿಸಿ:ಶ್ವೇತಾ

Published 17 ಏಪ್ರಿಲ್ 2024, 13:41 IST
Last Updated 17 ಏಪ್ರಿಲ್ 2024, 13:41 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಅನುಕೂಲ ಮಾಡಿದೆ. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದು ಮೈಸೂರು ಗ್ರಾಮಾಂತರ ಕಾಂಗ್ರೆಸ್‌ ಸಮಿತಿಯ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಶ್ವೇತಾ ಮಡಪ್ಪಾಡಿ ಬುಧವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಸರ್ಕಾರ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ತಿಂಗಳಿಗೆ ₹2000 ನೀಡುತ್ತಿದೆ. ಮಹಿಳೆಯರ ಸಬಲೀಕರಣಕ್ಕೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಹೇಳಿದರು. 

'ಕೇಂದ್ರದ ಬಿಜೆಪಿ ಸರ್ಕಾರ ಮಹಿಳೆಯರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. 2019ರಿಂದ 2021ರವರೆಗೆ ದೇಶದಲ್ಲಿ 13.13 ಲಕ್ಷ ಮಹಿಳೆಯರು ಕಾಣೆಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುತ್ತಿಲ್ಲ. ಮಹಿಳೆಯರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಕ್ರೀಡಾಕೂಟಗಳಲ್ಲಿ ದೇಶಕ್ಕೆ ಗೌರವ ತಂದು ಕೊಟ್ಟ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದರೆ, ಆರೋಪ ಹೊತ್ತ ವ್ಯಕ್ತಿಗಳನ್ನು ಬಿಜೆಪಿ ಬೆಂಬಲಿಸಿದೆ’ ಎಂದು ದೂರಿದರು. 

‘ಬಿಜೆಪಿ ಸಂವಿಧಾನದ ವಿರುದ್ಧವಾಗಿ ಮಾತನಾಡುತ್ತಿದೆ. ಸಂವಿಧಾನದ ಆಶಯಗಳಾದ ಜಾತ್ಯತೀತ, ಪ್ರಜಾಸತ್ತಾತ್ಮಕ ನಿಲುವಿಗೆ ವಿರುದ್ಧವಾಗಿ ಆಡಳಿತವನ್ನೇ ಧಾರ್ಮಿಕೀಕರಣಗೊಳಿಸಲು ಹೊರಟಿದೆ. ಬಿಜೆಪಿಗೆ ಮತ ಹಾಕಿದರೆ ದೇಶದ ಆರ್ಥಿಕ ಸ್ಥಿತಿ ಕ್ಷೀಣಿಸಿ ಸಾಮಾಜಿಕ ಅನ್ಯಾಯ ಹೆಚ್ಚಾಗಲಿದೆ’ ಎಂದು ಶ್ವೇತಾ ಹೇಳಿದರು. 

‘ಚಾಮರಾಜನಗರದ ಪಕ್ಷದ ಅಭ್ಯರ್ಥಿ ಸುನಿಲ್‌ ಬೋಸ್‌ ಅವರಿಗೆ ರಾಜಕೀಯ ಹಿನ್ನಲೆ ಇದೆ. ಅವರಿಗೆ ಜನರ ಬೇಕು ಬೇಡಗಳು ಅರ್ಥವಾಗುತ್ತವೆ. ಹಾಗಾಗಿ ಬೋಸ್‌ ಅವರನ್ನು ಗೆಲ್ಲಿಸಿ, ಈ ದೇಶದ ಗೆಲುವಿಗೆ ಕ್ಷೇತ್ರದ ಜನರು ಕಾರಣರಾಗಬೇಕು. ಜಿಲ್ಲೆಯ ಜನರ ಮೇಲೆ ಸಿದ್ದರಾಮಯ್ಯ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಅದನ್ನು ಮತದಾರರು ಉಳಿಸಿಕೊಳ್ಳಬೇಕಿದೆ. ಹಾಗಾಗಿ, ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು. 

ದರ್ಶನ್, ನಾಗರಾಜು, ಪರಶಿವಮೂರ್ತಿ, ವಿಷ್ಣುಪ್ರಿಯ, ಮರಿಯಾಲಹುಂಡಿ ಕುಮಾರ್, ನಟರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT