ಚಾಮರಾಜನಗರ: ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯಲ್ಲಿ ಮುಸ್ಲಿಮರು ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಿದರು. ಈ ವರ್ಷ ಕೋವಿಡ್ ಕಾರಣದಿಂದ ಅದ್ಧೂರಿ ಆಚರಣೆ ಇರಲಿಲ್ಲ.
ಮಸೀದಿ, ದರ್ಗಾ ಹಾಗೂ ಇನ್ನಿತರ ವಕ್ಫ್ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದೆ ಸರಳವಾಗಿ ಆಚರಿಸುವಂತೆ ವಕ್ಫ್ ಇಲಾಖೆ ಸೂಚಿಸಿತ್ತು.
ಹಬ್ಬದ ಪ್ರಯುಕ್ತ ನಡೆಸಲಾಗುತ್ತಿದ್ದ ಸಾಮೂಹಿಕ ಮೆರವಣಿಗೆ, ಸಭೆ-ಸಮಾರಂಭಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು, ಡಿಜಿಟಲ್ ಸೌಂಡ್ ಸಿಸ್ಟಮ್ ಬಳಕೆಯನ್ನೂ ಜಿಲ್ಲಾಡಳಿತ ನಿಷೇಧಿಸಿತ್ತು.
ಆದ್ದರಿಂದ ಈ ಬಾರಿಯ ಆಚರಣೆ ಮಸೀದಿಗಳಿಗೆ ಮಾತ್ರ ಸೀಮಿತವಾಗಿತ್ತು. ಹಬ್ಬದ ಅಂಗವಾಗಿ ಪುರುಷರು ಮಸೀದಿಗಳಲ್ಲಿ ಪ್ರಾರ್ಥನೆ ನಡೆಸಿದರೆ, ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಮನೆಗಳಲ್ಲಿ ಪ್ರಾರ್ಥನೆ, ಕುರ್ ಅನ್ ಪಠಿಸಿದರು.
ಮಸೀದಿಗಳಲ್ಲಿ ಧರ್ಮಗುರುಗಳು ಪ್ರವಚನ ನಡೆಸಿಕೊಟ್ಟರು. ಪ್ರವಾದಿ ಅವರ ಜೀವನ ಸಂದೇಶಗಳನ್ನು ವಿವರಿಸಿದರು.