ಗುಂಡ್ಲುಪೇಟೆ: ‘ಹಾವುಗಳು ರೈತನ ಮಿತ್ರನಾಗಿದ್ದು, ಇಲಿಗಳನ್ನು ತಿಂದು ಬೆಳೆಗಳನ್ನು ರಕ್ಷಿಸುತ್ತವೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ತಿಳಿಸಿದರು.
ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಶ್ವ ಹಾವು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವಿಶ್ವದಲ್ಲಿ ಸುಮಾರು 3,600 ಹಾವುಗಳಿದ್ದು, ಭಾರತದಲ್ಲಿ 278 ವಿಧದ ಹಾವುಗಳಿವೆ. ಅವುಗಳಲ್ಲಿ ಶೇ 6ರಷ್ಟು ಮಾತ್ರ ವಿಷಯುಕ್ತವಾಗಿದ್ದು, ಮಿಕ್ಕವು ನಿರಪಾಯಕಾರಿ. ನಾಗರಹಾವು, ಕಾಳಿಂಗ, ಮಂಡಲದ ಹಾವು, ಕಟ್ಟು ಹಾವು, ಸಮುದ್ರದ ಹಾವು ಹಾಗೂ ಮಲಬಾರ್ ಪಿಟ್ ವೈಪರ್ ವಿಷಯುಕ್ತವಾಗಿವೆ. ನಾಗರ ಹಾವು, ಕಾಳಿಂಗ, ಮಂಡಲದ ಹಾವು, ಕಟ್ಟು ಹಾವುಗಳಿಂದ ಹೆಚ್ಚು ಜನ ಮೃತಪಡುತ್ತಿದ್ದಾರೆ’ ಎಂದು ಹೇಳಿದರು.
ವಿಜ್ಞಾನ ಶಿಕ್ಷಕ ಮಂಜು ಮಾತನಾಡಿ, ‘ಹಾವಿನ ಕಡಿತಕ್ಕೆ ಔಷಧವನ್ನು ಕೆಲವೆಡೆ ಹಾವಿನ ವಿಷದಿಂದಲೇ ತಯಾರಿಸುತ್ತಾರೆ. ಹಾವುಗಳಿಗೆ ಮನುಷ್ಯರು ಯಾವುದೇ ರೀತಿಯ ತೊಂದರೆ ನೀಡದಿದ್ದರೆ ಅವು ಸಹ ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ. ಹಾವುಗಳನ್ನು ಕಂಡರೆ ಕೊಲ್ಲದೆ ಉಗರ ತಜ್ಞರಿಂದ ಹಾವು ಹಿಡಿಸಿ ಕಾಡಿಗೆ ಬಿಡುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಅವರು ತಾವು ಸೆರೆ ಹಿಡಿದ ಹಾವುಗಳ ಛಾಯಾಚಿತ್ರ ಪ್ರದರ್ಶಿಸಿದರು. ಹಾವವಿನ ಗುಣ ಲಕ್ಷಣಗಳನ್ನು ವಿವರಿಸಿ, ತಾವೇ ಬರೆದ ಹಾವುಗಳ ಬಗೆಗಿನ ಕಿರು ಪುಸ್ತಕವನ್ನು ಮಕ್ಕಳಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜುನಾಥ್, ನಂಜುಂಡಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.