ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷ: ಪ್ರಕೃತಿಯಲ್ಲಿ ಜೀವಂತಿಕೆಯ ಹರ್ಷ

ಮುಳ್ಳು, ಕಳೆ, ಕೆರೆ ಸಸ್ಯಗಳಲ್ಲೂ ಈಗ ಹೊಸತನದ ಉಲ್ಲಾಸ
Last Updated 1 ಜನವರಿ 2021, 19:30 IST
ಅಕ್ಷರ ಗಾತ್ರ

ಯಳಂದೂರು: ನಾವು ಮಾತ್ರ ಅಲ್ಲ; ಪ್ರಕೃತಿ ಕೂಡ ಹೊಸ ವರ್ಷವನ್ನು ತನ್ನದೇ ರೀತಿಯಲ್ಲಿ ಭರ್ಜರಿಯಾಗಿ ಸ್ವಾಗತಿಸುತ್ತದೆ. ಜನವರಿ ಎಂಬುದು ಪರಿಸರಕ್ಕೆ ಮೆರುಗು ಜೀವಂತಿಕೆ ತುಂಬುವ ತಿಂಗಳು.

ಸುತ್ತಲಿನ ವಾತಾವರಣವನ್ನು ಗಮನಿಸಿ.ಈ ಸಮಯದಲ್ಲಿ ಭೂರಮೆಯನ್ನು ಮಂಜಿನ ಪಸೆ ಆವರಿಸಿರುತ್ತದೆ. ಮುಳ್ಳು ಗಿಡ, ಕಳೆಸಸ್ಯಗಳಲ್ಲಿ ಅರಳಿಕೊಳ್ಳುವ ಹೂಗಳು ಪ್ರಕೃತಿಯ ವಿಲಾಸ ದರ್ಶನ ಮಾಡಿಸುತ್ತವೆ. ಕೆಲವೇಸಮಯ ಅರಳುವ ಪುಷ್ಪಲೋಕ ಪಕ್ಷಿ, ಜೇನು, ಪತಂಗಗಳನ್ನು ಸೆಳೆದು ರುಜು ಪಡೆದು, ನವ ವರ್ಷದಆರಂಭಕ್ಕೂ ಜೀವಂತಿಕೆ ಚೆಲ್ಲುತ್ತವೆ.

ತಾಲ್ಲೂಕಿನಲ್ಲಿ ಈಗ ಚಳಿ, ಬಿಸಿಲಿನ ಹಿತಕಾರಿ ಅನುಭವ. ಕೆರೆಕಟ್ಟೆ ಸೇರಿದ ನೀರಲ್ಲಿ ಹುಟ್ಟಿದ ಕಳೆಗಿಡ, ಬೇಲಿ ಬದಿಯಲ್ಲಿ ಒಣಗಿ ನಿಂತ ಮುಳ್ಳು ಬಳ್ಳಿ, ನೆಲವಪ್ಪಿ ವೃದ್ಧಿಸುವ ಇಂಚಿಂಚು ಸಸ್ಯಗಳಲ್ಲೂ ಈಗ ನವೋಲ್ಲಾಸ ಕಾಣುತ್ತಿದೆ. ವರ್ಣ ವೈವಿಧ್ಯದ ಕುಸುಮಗಳು ತಮ್ಮ ಚೆಲುವಿನಿಂದಲೇ ಮನಸೆಳೆಯುತ್ತಿವೆ. ಒಣಗಿದ ಗಿಡದಲ್ಲೂ ವಿಕಾಸ ಹೊಂದಿ, ತಮ್ಮ ಸಂತತಿ ಉಳಿಸುವ ಜರೂರಿನಲ್ಲಿಇವೆ.

‘ಇವಕ್ಕೆ ಮೂಲ ಹೆಸರಿಲ್ಲ, ಆದರೆ, ಇರುವಷ್ಟು ಕಾಲ ಮನುಕುಲದ ನೆರವಿಗೆ ಬಳಕೆಆಗುತ್ತವೆ’ ಎಂಬುದು ಪರಿಸರ ಪ್ರಿಯರ ಮಾತು.

‘ಈಗ ದೀರ್ಘ ಹಗಲಿನ ಸಮಯ, ಇಳೆಯ ಮೇಲಿನ ಸಮಸ್ತ ಜೀವಕೋಟಿ ನೇಸರನ ಕಿರಣಕ್ಕೆ ಮೈಒಡ್ಡಿಕೊಳ್ಳುವ ಹೊತ್ತು. ಎಲ್ಲ ಸಸ್ಯ ನಮೂನೆಗಳು ಇಲ್ಲಿನ ಪರಿಸರದಲ್ಲಿರಾರಾಜಿಸುತ್ತವೆ. ಸಸ್ಯ ವಿಜ್ಞಾನಿಗಳು ಕಾಲಿಡುವ ಮೊದಲೇ ಜನಪದರು ಸಣ್ಣಪುಟ್ಟಸಸ್ಯವರ್ಗಕ್ಕೆ ನಾಮಕರಣ ಮಾಡಿದ್ದಾರೆ. ಇಲ್ಲಿನ ಜನರೊಟ್ಟಿಗೆ ಸುಮಗಳ ಹೆಸರು, ಅವುಗಳಬಳಕೆ ಮತ್ತು ಅವುಗಳಲ್ಲಿ ಇರುವ ಔಷಧೀಯ ಗುಣಗಳನ್ನು ತಿಳಿದಿದ್ದಾರೆ. ಪುಷ್ಪ ಕುಲಗಳಿಂದಜನ-ಜಾನುವಾರುಗಳಿಗೆ ಲಭಿಸುವ ಉಪಯೋಗ ಅನನ್ಯ’ ಎಂದು ಹೇಳುತ್ತಾರೆ ಜೀವವಿಜ್ಞಾನ ಶಿಕ್ಷಕಸಂತೇಮರಹಳ್ಳಿಯ ನಿಂಗರಾಜು ಅವರು.

ತಾಲ್ಲೂಕಿನ ಕಾನನ ಮತ್ತು ಕೆರೆಗಳಲ್ಲಿ ಅನೇಕ ಬಗೆಯ ಸಸ್ಯಸಿರಿ ಆವರಿಸಿವೆ. ಹುಲ್ಲು,ಕಂಟಿ, ಮುಳ್ಳು ಮತ್ತು ಅಪ್ಪುಗೆ ಸಸ್ಯಲೋಕ ಬಗೆ ಬಗೆಯ ಹೂ ಬಿಟ್ಟಿದೆ. ಕೆಲವು ಸದಾಹಸಿರು, ಶುಷ್ಕ, ಕುರುಚಲು, ಶೋಲಾ, ಬೈಸೆ ಅಭಯಾರಣ್ಯದ ಭಾಗವಾದರೆ, ಉಳಿದವು ಬಯಲನ್ನುಅಪ್ಪಿವೆ. ವನ್ಯ ಜೀವಿಗಳ ಬದುಕಿಗೂ ಆಹಾರದ ಮೂಲವಾಗಿವೆ. ಪುಷ್ಪಲೋಕ ಜೇನು, ಕೀಟ,ಪಕ್ಷಿಗಳ ಆವಾಸ ವಿಸ್ತಾರಕ್ಕೆ ನೆಲೆ ಒದಗಿಸುತ್ತಿವೆ.

'ಆಯಾ ಪ್ರದೇಶದ ಮಳೆ ಪ್ರದೇಶ, ಮಣ್ಣಿನ ಗುಣ, ತಾಪಮಾನ, ಏರಿಳಿತ ಮತ್ತು ಭೌಗೋಳಿಕ ಸ್ಥಾನಮಾನಕ್ಕೆ ಅನುಗುಣವಾಗಿ ಸಸ್ಯಪ್ರಭೇದಗಳು ರೂಪು ತಳೆಯುತ್ತವೆ. ಕೆರೆ-ಕಟ್ಟೆಯಲ್ಲಿನ ಸಸ್ಯಗಳ ಸುಮ ಇನ್ನಿತರ ಕೀಟಗಳಆಕರ್ಷಣೆಗೆ ಕಾರಣವಾಗಿವೆ. ಇವು ಆಹಾರದ ಸರಪಳಿಯ ಭಾಗವಾಗಿ ಇತರ ಜೀವಿಗಳ ಬದುಕುರೂಪಿಸಿವೆ. ಈ ದೆಸೆಯಲ್ಲಿ ಪ್ರತಿ ಕುಸುಮ ಮುಂದಿನ ಜೀವ-ಜಗತ್ತನ್ನು ಪೊರೆಯುವ ಗುಣಹೊಂದಿವೆ' ಎಂದು ಏಟ್ರೀ ವಿಜ್ಞಾನಿ ಸಿದ್ದಪ್ಪಶೆಟ್ಟಿ ಅವರು ಹೇಳಿದರು.

‘ನಮ್ಮ ಸುತ್ತಮುತ್ತಲ ನಿಸರ್ಗದಲ್ಲಿ ಮುಂಜಾವು ಚುಮು ಚುಮು ಚಳಿಯಲ್ಲಿ ಅಡ್ಡಾಡಿದರೆ ಅಪರೂಪದ ಹೂಗಳ ದರ್ಶನವಾಗುತ್ತವೆ. ಬಣ್ಣ, ವಿನ್ಯಾಸದಿಂದ ಮನ ಸೆಳೆಯುತ್ತವೆ.ಸೂರ್ಯೋದಯದ ನಂತರ ಕೆಲವು ಲತೆಗಳು ಉದುರುತ್ತವೆ. ಇವುಗಳನ್ನು ಸಂಗ್ರಹಿಸಿ ಅಲಂಕಾರಕ್ಕೆ ಬಳ‌ಸಬಹುದು. ಇದರಿಂದ ಕಾರ್ಯಕ್ರಮಗಳ ಮೆರಗು ಹೆಚ್ಚಿಸಬಹುದು’ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕಸಂಶೋಧನ ಪರಿಷತ್ ಸಂಚಾಲಕ ಮುಡಿಗುಂಡ ಮಹದೇವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT