ಗುಂಡ್ಲುಪೇಟೆ: ತಾಲ್ಲೂಕಿನ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಲಕ್ಕಿಪುರ ಗ್ರಾಮದಲ್ಲಿಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರ ಮೇಲೆ ಶನಿವಾರ ಹುಲಿಯೊಂದು ದಾಳಿ ಮಾಡಿದೆ. ರೈತನ ಬಲಗಣ್ಣಿನ ಭಾಗ ಹಾಗೂ ತಲೆಗೆ ತೀವ್ರ ಗಾಯವಾಗಿದೆ.
ಗೋಪಾಲಪುರ ಗ್ರಾಮದ ಗವಿಯಪ್ಪ (45) ಹುಲಿ ದಾಳಿಗೆ ತುತ್ತಾದ ರೈತ.
ಗವಿಯಪ್ಪ ಅವರು ಶನಿವಾರವೂ ಎಂದಿನಂತೆ ಜಮೀನಿಗೆ ತೆರಳಿ ಕೆಲಸ ಮಾಡುತ್ತಿದ್ದ ವೇಳೆ ದಾಳಿ ದಿಢೀರ್ ದಾಳಿ ಮಾಡಿದೆ. ಈ ವೇಳೆ ರೈತ ಕೂಗಿಕೊಂಡಿದ್ದರಿಂದ ಸುತ್ತಮುತ್ತಲ ಜಮೀನಿನ ರೈತರು ಚೀರಾಡಿಕೊಂಡು ಧಾವಿಸಿದಾಗ ಹುಲಿ ಓಡಿಹೋಗಿದೆ.
ಪಕ್ಕದ ಜಮೀನಿನ ಪೊದೆಯಲ್ಲಿ ಅದು ಅವಿತುಕುಳಿತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಗವಿಯಪ್ಪ ಅವರ ಕಣ್ಣಿನ ಭಾಗ ಹಾಗೂ ತಲೆಗೆ ತೀವ್ರ ಗಾಯವಾಗಿದ್ದು, ಮೈ ಮೇಲೆ ಪರಚಿದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ.
ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯಾಧಿಕಾರಿ ನವೀನ್ ಕುಮಾರ್ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಹುಲಿ ದಾಳಿಯಿಂದ ಕೋಪಗೊಂಡಿರುವ ಗ್ರಾಮಸ್ಥರು ಸ್ಥಳಕ್ಕೆ ಭೇಟಿನೀಡಿದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.