ಮಹದೇಶ್ವರ ಬೆಟ್ಟ: ಧಾರಾಕಾರ ಮಳೆ ಹಾಗೂ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಹೊಗೆನಕಲ್ ಜಲಪಾತ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಆವರಿಸಿದ್ದು, ಇಡೀ ಪ್ರದೇಶ ಮುಳುಗಡೆಯಾಗಿದೆ.
ತಮಿಳುನಾಡು ಭಾಗದಲ್ಲಿ ಜಲಪಾತ ವೀಕ್ಷಣೆ ಮಾಡುವ ಹಾಗೂ ನೀರಾಟ ಆಡುವ ಸ್ಥಳ ಕೂಡ ಜಲಾವೃತವಾಗಿದ್ದು, ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಕರ್ನಾಟಕ ಭಾಗದಲ್ಲೂ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ನದಿ ಅಂಚಿನರಲ್ಲಿರುವಆಲಂಬಾಡಿ, ಆತೂರು, ಜಂಬಲ್ಪಟ್ಟಿ ಗ್ರಾಮಗಳು ನೆರೆ ಭೀತಿಯನ್ನು ಎದುರಿಸುತ್ತಿವೆ.
ಅತ್ತ ತಮಿಳುನಾಡಿನ ಮೆಟ್ಟೂರು ಜಲಾಶಯದಿಂದ 2.10 ಲಕ್ಷ ಕ್ಯುಸೆಕ್ಗಳಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯ ಭರ್ತಿಯಾಗಿರುವುದರಿಂದ ಹಿನ್ನೀರು ವ್ಯಾಪ್ತಿ ವಿಸ್ತಾರವಾಗಿದ್ದು, ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿವೆ
ಸೇತುವೆ ಮೇಲೆ ನೀರು: ಹೊಗೆನಕಲ್, ಗೋಪಿನಾಥಂಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ನೀರಿನಿಂದ ಆವೃತವಾಗಿದ್ದು, ಜನರು, ವಾಹನಗ ಸಂಚಾರಕ್ಕೆ ತೊಂದರೆಯಾಗಿದೆ.
ಗೋಪಿನಾಥಂ ಅಣೆಕಟ್ಟು ಹಾಗೂ ಮೆಟ್ಟೂರು ಜಲಾಶಯ ಹಿನ್ನೀರು ಹೆಚ್ಚಳವಾದ ಪರಿಣಾಮ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ಹೊಗೆನಕಲ್ ರಸ್ತೆಯಲ್ಲಿರುವ ಸಂಗೈಕೊಂಬು ಸೇತುವೆ ಮುಳುಗಡೆಯಾಗಿದೆ.
ನೀರು ರಭಸವಾಗಿ ಹರಿಯುತ್ತಿರುವುದರಿಂದ ಆಲಂಬಾಡಿ, ಜಂಬಲ್ ಪಟ್ಟಿ, ಮಾರಿಕೊಟ್ಟಾಯಂ ಹಾಗೂ ಹೊಗೆನಕಲ್ ಜಲಪಾತಕ್ಕೆ ತೆರಳುವ ಮಾರ್ಗ ಕಡಿತಗೊಂಡಿದೆ. ಗುರುವಾರ ಸೇತುವೆ ಮುಳುಗಡೆಯಾಗಿದ್ದು, ಶುಕ್ರವಾರವೂ ಇದೇ ಪರಿಸ್ಥಿತಿ ಮುಂದುವರಿದಿದೆ.