ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬಲಾ ವಾದನ ಪ್ರವೀಣ ದಶ‍‍ಪಾಲ್‌, 45 ವರ್ಷಗಳಿಂದ ಕಲಾಸೇವೆ

ವಿವಿಧ ರಾಜ್ಯಗಳಲ್ಲಿ ಕಲಾ ಪ್ರೌಢಿಮೆ ಪ್ರದರ್ಶನ
Last Updated 17 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಪಠ್ಯವೇ ಬದುಕಲ್ಲ ಎಂಬುದು ಇವರ ನಂಬಿಕೆ. ಅದರಂತೆ, ಶಿಕ್ಷಣದಲ್ಲಿ ದೊಡ್ಡ ಮಟ್ಟಿನ ಸಾಧನೆಯನ್ನೇನೂ ಇವರು ಮಾಡಿಲ್ಲ. ಆದರೆ, ಕಲೆಯ ಮೇಲಿದ್ದ ಆಸಕ್ತಿ ಅವರನ್ನು ಯಶಸ್ಸಿನ ಮೆಟ್ಟಿಲು ಏರುವಂತೆ ಮಾಡಿದೆ.

ನಗರದ ದೇವಾಂಗ ಪೇಟೆಯ ನಿವಾಸಿ ಎ.ವಿ.ದಶಪಾಲ್‌ ಅವರು ತಬಲಾ ಸಾಧಕ. ತಬಲಾ ಮೇಲೆ ಇವರು ಬೆರಳುಗಳನ್ನು ಹೊರಳಿಸಲು ಆರಂಭಿಸಿದರೆ, ಅದು ಹೊಮ್ಮಿಸುವ ನಾದಕ್ಕೆ ಎಲ್ಲರೂ ತಲೆದೂಗಲೇ ಬೇಕು. ಆ ಮಟ್ಟಿಗಿನ ಕಲಾಶಕ್ತಿ ಇವರಿಗೆ ಒಲಿದಿದೆ.

ದಶಪಾಲ್‌ ಅವರಿಗೆ ಈಗ 58ರ ಹರೆಯ. 45 ವರ್ಷಗಳಿಂದಲೂ ತಬಲಾ ವಾದನದಲ್ಲಿ ತೊಡಗಿಕೊಂಡಿದ್ದಾರೆ. ತಬಲ ನುಡಿಸುವ ಕಲೆಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡಿರುವ ದಶಪಾಲ್‌ ಅವರು ಟೈಲರಿಂಗ್‌ ಅನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ನಾಟಕಗಳಲ್ಲಿತಬಲಾ ಸದ್ದು: ಅನೇಕ ನಾಟಕಗಳಿಗೆ, ರಸಮಂಜರಿ ಹಾಗೂ ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಇವರು ತಬಲಾ ವಾದಕರಾಗಿ ಕೆಲಸ ಮಾಡಿದ್ದಾರೆ.ದಕ್ಷಯಜ್ಞ, ಕುರುಕ್ಷೇತ್ರ, ದಾನ ಶೂರ ಕರ್ಣ, ಶಿವಯೋಗಿ, ಸತ್ಯಹರಿಶ್ಚಂದ್ರ, ಪ್ರಭುಲಿಂಗಲೀಲಾ, ಶಿವ ಜಲೇಂದ್ರ, ಭಕ್ತ ಪ್ರಹ್ಲಾದ, ಸತ್ಯಮೂರ್ತಿ... ಮುಂತಾದ ಅನೇಕ ಪೌರಾಣಿಕ ನಾಟಕಗಳಿಗೆ ಇವರು ತಬಲಾ ನುಡಿಸಿದ್ದಾರೆ.

ನೂರಾರು ಗೌರವ:ವಿವಿಧರಾಜ್ಯಗಳಿಗೆ ಹೋಗಿ ಅನೇಕ ಕಡೆ ಸ್ಪರ್ಧಿಸಿ ಬಹುಮಾನಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ದೆಹಲಿ, ಮಹಾರಾಷ್ಟ್ರ, ಗೋವಾ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲೂ ಪ್ರದರ್ಶನ ನೀಡಿ, ಕಲಾ ಪ್ರೌಢಿಮೆ ಮೆರೆದಿದ್ದಾರೆ.

‘ತಬಲಾ ನುಡಿಸುವ ಕಲೆ ನಮ್ಮ ಕುಟುಂಬದಿಂದ ಸಿಕ್ಕ ಉಡುಗೊರೆ. ನನ್ನತಾತ, ಮುತ್ತಾತರ ಕಾಲದಿಂದಲೂ ನಮ್ಮ ಕುಟುಂಬದ ಸದಸ್ಯರು ತಬಲಾ ನುಡಿಸುವುದರಲ್ಲಿ ನಿಷ್ಣಾತರು.ನಾನು6ನೇ ತರಗತಿ ಇರುವಾಗಲೇಶಿಕ್ಷಣದಿಂದದೂರ ಉಳಿದೆ. ನಂತರನನ್ನ ತಂದೆಯವರಾದ ತಬಲಾ ಅಚ್ಗಾಳ್ ವೀರಭದ್ರಯ್ಯ ಅವರ ವೃತ್ತಿಯನ್ನೇ ಆರಿಸಿಕೊಂಡೆ’ ಎಂದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ ವಿವಿಧ ಕಡೆ ಪ್ರದರ್ಶನಗಳನ್ನುನೀಡಿ ಜನರ ಮೆಚ್ಚುಗೆ ಪಡೆದಿದ್ದೇನೆ. ಮಗ ಅರ್ಜನ್ ಈಗ ಎಂಬಿಎಪದವಿ ಮುಗಿಸಿದ್ದಾನೆ. ಅವನು ಕೂಡ ತಬಲಾ ವಾದನದ ಕಡೆ ಒಲವು ತೋರುತ್ತಿದ್ದಾನೆ’ ಎಂದು ಅವರು ತಿಳಿಸಿದರು.

ಗ್ರಾಮೀಣ ಮಕ್ಕಳಿಗೆ ಉಚಿತ ತರಬೇತಿ

ದಶಪಾಲ್‌ ಅವರ ಮನೆಯಲ್ಲಿ ತಬಲಾ, ಡಗ್ಗಗಳ ಸಣ್ಣ ಸಂಗ್ರಹಾಲಯವೇ ಇದೆ.

‘ಮಕ್ಕಳಿಗೆ ತಬಲಾವನ್ನು ಪ್ರತಿ ನಿತ್ಯ ಹೇಳಿಕೊಡುತ್ತೇನೆ. ಯಾರ ಕೈಯಿಂದಲೂ ಶುಲ್ಕ ಕೇಳುವುದಿಲ್ಲ. ಅವರೆ ನೀಡಿದರೇ ಮಾತ್ರ ಪಡೆದುಕೊಳ್ಳುತ್ತೇನೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಹೇಳಿಕೊಡುತ್ತೇನೆ.ನನ್ನ ಪತ್ನಿ ಕೂಡ ನನ್ನ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾಳೆ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.

‘ನನ್ನ ಈ ಸಾಧನೆಗೆ ನನ್ನ ಕುಟುಂಬ ಸದಸ್ಯರೇ ಕಾರಣ. ತಬಲಾ ವಾದನವೇ ನನ್ನ ಜೀವನ’ ಎಂದು ವಿನೀತರಾಗಿ ಹೇಳುತ್ತಾರೆ ದಶಪಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT