ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ: ಮೂಲಸೌಕರ್ಯದ್ದೇ ಸಮಸ್ಯೆ

ಸ್ವಂತ ಕಟ್ಟಡಗಳ ಕೊರತೆ, ಬಾಡಿಗೆ ಕಟ್ಟಡಗಳಲ್ಲಿ ಸ್ಥಳಾವಕಾಶ ಕಡಿಮೆ, ನಿರ್ವಹಣೆಯ ಸಮಸ್ಯೆ
Last Updated 10 ಜುಲೈ 2022, 17:39 IST
ಅಕ್ಷರ ಗಾತ್ರ

ಚಾಮರಾಜನಗರ: ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಬೇಕಾದ ಅಂಗನವಾಡಿ ಕೇಂದ್ರಗಳು ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ.

ನಿವೇಶನ, ಸ್ವಂತ ಕಟ್ಟಡಗಳ ಕೊರತೆ, ಬಾಡಿಗೆ ಕಟ್ಟಡಗಳಲ್ಲಿ ಸ್ಥಳಾವಕಾಶದ ಕೊರತೆ, ಇರುವ ಕಟ್ಟಡಗಳ ನಿರ್ವಹಣೆ ಕೊರತೆ ಅಂಗನವಾಡಿ ಕೇಂದ್ರಗಳನ್ನು ಕಾಡುತ್ತಿದೆ. ಲಭ್ಯವಿರುವ ಸಂಪನ್ಮೂಲದಲ್ಲೇ ಅಂಗನವಾಡಿಗಳನ್ನು ನಿರ್ವಹಿಸಲು ಇಲಾಖೆ ಪ್ರಯತ್ನಿಸುತ್ತಿದೆ. ಕೊರತೆಗಳ ನಡುವೆಯೂ ಪೋಷಣ್‌ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ.

50 ಮಿನಿ ಅಂಗನವಾಡಿ ಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿ 1,425 ಅಂಗನವಾಡಿ ಕೇಂದ್ರಗಳಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 60,460 ಮಕ್ಕಳ ದಾಖಲಾತಿ ಗುರಿ ನೀಡಲಾಗಿದೆ. 52,491 ಮಕ್ಕಳು ಇದ್ದಾರೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಈ ಬಾರಿ ಪರಿಸ್ಥಿತಿ ಸುಧಾರಿಸಿದೆ.

1,425 ಅಂಗನವಾಡಿ ಕೇಂದ್ರಗಳಲ್ಲಿ 1,098 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. 205 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸಮುದಾಯ ಕಟ್ಟಡಗಳಲ್ಲಿ 54 ಕೇಂದ್ರಗಳಿವೆ. ನಗರ ಪ್ರದೇಶದ ಆರು ಹಾಗೂ ಗ್ರಾಮೀಣ ಭಾಗ ದಲ್ಲಿ 82 ಸೇರಿದಂತೆ 88 ಕಟ್ಟಡ ಗಳು ಶಿಥಿಲವಾಗಿವೆ. ತೀರಾ ಶಿಥಿಲಗೊಂಡಿ ರುವ ಕಟ್ಟಡಗಳನ್ನು ಮುಚ್ಚಲಾಗಿದೆ.

ಹೆಂಚು ಹಾಳಾಗಿರುವ, ಗೋಡೆ, ಚಾವಣಿ, ನೆಲದಲ್ಲಿ ಸಿಮೆಂಟು ಕಿತ್ತು ಬಂದಿರುವ, ಬಣ್ಣ ಮಾಸಿರುವ, ಸೌಕರ್ಯಗಳ ಕೊರತೆ ಇರುವ ಅಂಗನವಾಡಿಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಇದರ ನಡುವೆಯೇ ಚಿಣ್ಣರು ಆಟವಾಡಬೇಕಿದೆ. ಅಕ್ಷರಾಭ್ಯಾಸ ಮಾಡಬೇಕಿದೆ. ಎಲ್ಲ ಸೌಕರ್ಯಗಳಿದ್ದು, ಮಾದರಿಯಾಗಿರುವ ಅಂಗನವಾಡಿ ಕೇಂದ್ರಗಳ ಸಂಖ್ಯೆ ಕಡಿಮೆ ಇದೆ. ಹಾಗಿದ್ದರೂ, ಎಲ್ಲ ಮಕ್ಕಳಿಗೆ ಇಲಾಖೆ ತಪ್ಪದೇ ಆಹಾರ ಪೂರೈಸುತ್ತಿದೆ.

ಸ್ವಂತ ಕಟ್ಟಡಗಳಿರುವ ಕೇಂದ್ರಗಳಲ್ಲಿ ಕನಿಷ್ಠ ಸೌಕರ್ಯಗಳಾದರೂ ಇವೆ. ಆದರೆ,ಬಾಡಿಗೆ ಕಟ್ಟಡಗಳಲ್ಲಿ ನಡೆ ಯುತ್ತಿರುವ ಅಂಗನವಾಡಿಗಳ ಸ್ಥಿತಿ ಹೇಳಲು ಸಾಧ್ಯವಿಲ್ಲ. ನಗರ ಹಾಗೂ ಪಟ್ಟಣ ಪ‍್ರದೇಶಗಳಲ್ಲಿ ಕೆಲವು ಕಡೆಗಳಲ್ಲಿ ಪುಟ್ಟ ಕೊಠಡಿಯಲ್ಲಿ ಅಂಗನವಾಡಿ ಕಾರ್ಯಾಚರಿಸುತ್ತಿವೆ.

ತೀರಾ ಗ್ರಾಮೀಣ ಭಾಗಗಳಲ್ಲಿ ಹಾಗೂ ಕಾಡಂಚಿನ ಗ್ರಾಮಗಳ ಅಂಗನವಾಡಿಗಳಲ್ಲಿ ಹೆಚ್ಚಿನ ಸಮಸ್ಯೆ ಇದೆ. ಇರುವ ಮೂಲಸೌಕರ್ಯಗಳು ಅಲ್ಲಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಗುಡ್ಡಗಾಡು ಪ್ರದೇಶದಿಂದ ಆವೃತವಾಗಿರುವ ಹನೂರು ತಾಲ್ಲೂಕಿನಲ್ಲಿ ಸಮಸ್ಯೆಗಳು ತೀವ್ರವಾಗಿವೆ.

ಗಿರಿಜನ ಹಾಡಿಗಳಲ್ಲಿ ಅಂಗನವಾಡಿಗಳ ಕೊರತೆ ಇದೆ. ದೂರ ಇರುವುದರಿಂದ ಮಕ್ಕಳು ಅಂಗನವಾಡಿಗಳಿಗೆ ಹೋಗುತ್ತಿಲ್ಲ. ಹಲವು ಬಾರಿ ಮನವಿ ಮಾಡಿದ್ದರೂ ಇಲಾಖೆ ಸ್ಪಂದಿಸುತ್ತಿಲ್ಲ ಎಂಬುದು ಗಿರಿಜನ ಮುಖಂಡರ ದೂರು.

ಕಳ‍ಪೆ ಆಹಾರ ಪೂರೈಕೆ ಆರೋಪ: ಹನೂರು ತಾಲ್ಲೂಕಿನಲ್ಲಿ ಇತ್ತೀಚೆಗೆ ಕೆಲವು ಅಂಗನವಾಡಿಗಳಿಗೆ ಕಳಪೆ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ ಹಾಗೂ ಆಹಾರ ಪದಾರ್ಥದ ತೂಕದಲ್ಲೂ ವ್ಯತ್ಯಾಸ ಇದೆ ಎಂಬ ಆರೋಪ ಕೇಳಿ ಬಂದಿತ್ತು.

ಸಿಬ್ಬಂದಿಯ ಕೊರತೆ: 1,425 ಅಂಗನವಾಡಿಗಳಿದ್ದರೂ, ಎಲ್ಲ ಅಂಗನವಾಡಿಗಳಿಗೂ ಕಾರ್ಯಕರ್ತೆಯರು ಹಾಗೂ ಸಹಾಯಕರು ಇಲ್ಲ. 1,318 ಕಾರ್ಯಕರ್ತೆಯರು ಹಾಗೂ 1,164 ಸಹಾಯಕಿಯರು ಇದ್ದಾರಷ್ಟೆ. ಇತ್ತೀಚೆಗೆ 50 ಕಾರ್ಯಕರ್ತರು ಹಾಗೂ 150 ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ಮುಗಿದಿದೆ.

ಕಾಯಕಲ್ಪಕ್ಕೆ ಪ್ರಯತ್ನ: ಜಿಲ್ಲೆಯ ಅಂಗನವಾಡಿಗಳಿಗೆ ಕಾಯಕಲ್ಪ ನೀಡುವ ಪ್ರಯತ್ನವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತಿವೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಅವರು ಅಂಗನವಾಡಿಗಳ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹೊಸ ಕಟ್ಟಡ ನಿರ್ಮಾಣ, ನಿವೇಶನ ಗುರುತಿಸುವಿಕೆ ಸೇರಿದಂತೆ ಅಂಗನವಾಡಿ ಕೇಂದ್ರಗಳಿಗೆ ಆಗಬೇಕಾದ ಕೆಲಸಗಳನ್ನು ಗುರುತಿಸಿ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಸೌಕರ್ಯ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ಪ್ರಯತ್ನದ ಭಾಗವಾಗಿ ಕಟ್ಟಡ ಹಾಗೂ ಇನ್ನಿತರ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದ ಅಂಗನವಾಡಿಗಳನ್ನು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸುವ ಪ್ರಯತ್ನ ನಡೆದಿದೆ. ಸ್ವಂತ ಕಟ್ಟಡ ಹಾಗೂ ಸಾಕಷ್ಟು ಜಾಗ ಇರುವ ಕಡೆಗಳಲ್ಲಿ ಕೈತೋಟ ನಿರ್ಮಿಸಲಾಗುತ್ತಿದೆ.

ಜನರು, ಪೋಷಕರು ಏನಂತಾರೆ?

ಅಂಗನವಾಡಿ ಕೇಂದ್ರ ಬೇಕು

ಹನೂರು ತಾಲ್ಲೂಕಿನ 10 ಗಿರಿಜನ ಹಾಡಿಗಳಲ್ಲಿ ಅಂಗನವಾಡಿ ಕೇಂದ್ರಗಳಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

– ಮುತ್ತಯ್ಯ,ಗಿರಿಜನ ಮುಖಂಡ

ಕಳಪೆ ಆಹಾರ ಪೂರೈಕೆ

ಅಂಗನವಾಡಿಯಲ್ಲಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಹುಳು ಮಿಶ್ರಿತ ಕಾಳುಗಳನ್ನು ನೀಡುತ್ತಾರೆ. ಇದರ ಬಗ್ಗೆ ಯಾವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೂ ಕೇಳುವುದಿಲ್ಲ. ಈ ಕಳಪೆ ಆಹಾರವನ್ನು ಸೇವಿಸಿದರೆ ಮಕ್ಕಳ ಗತಿಯೇನು?

–ಜಾಕಾವುಲ್ಲಾ,ಕೊಳ್ಳೇಗಾಲ

ಸರಿಯಾದ ಸ್ಪಂದನೆ ಇಲ್ಲ

ಗರ್ಭಿಣಿ ಸ್ತ್ರೀಯರಿಗೆ ಮೊಟ್ಟೆ ಮತ್ತಿತರ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಂಗನವಾಡಿ ಕೇಂದ್ರದಲ್ಲಿ ಊಟ ಮಾಡಬೇಕು ಎಂದು ಹೇಳುತ್ತಾರೆ. ಚಕಾರ ಎತ್ತದವರ ಮನೆಗೆ ಮಾತ್ರ ಪಡಿತರ ವಿತರಿಸುತ್ತಾರೆ. ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಸಿಗುವ ಪದಾರ್ಥಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಆಗಬೇಕಿದೆ.

–ಶಿಲ್ಪಾ,ಯರಗಂಬಳ್ಳಿ, ಯಳಂದೂರು ತಾಲ್ಲೂಕು

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ

ಅನೇಕ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಗಳು ಶಿಥಿಲವಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತಿ ವತಿಯಿಂದ ನಿವೇಶನ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಯಾವ ನಂಬಿಕೆಯಿಂದ ಮಕ್ಕಳು ಅಂಗನವಾಡಿಗಳಿಗೆ ಬರುತ್ತಾರೆ.

–ಬಿ.ಎಂ.ಮಂಜಪ್ಪ.ಶಿವಪುರ, ಗುಂಡ್ಲುಪೇಟೆ ತಾಲ್ಲೂಕು

ಸ್ಥಳಾಂತರವಾಗಿಲ್ಲ

ಸಂತೇಮರಹಳ್ಳಿಯಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸನಿಹದಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದ ಕಾಮಗಾರಿ ಮುಗಿದು ಎರಡು ವರ್ಷ ಕಳೆದಿದೆ. ಇಂದಿಗೂ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿಲ್ಲ. ಕಟ್ಟಡದ ಸುತ್ತಲೂ ಪಾರ್ಥೇನಿಯಂ ಹಾಗೂ ಕಳೆಗಿಡಗಳು ವ್ಯಾಪಕವಾಗಿ ಹಬ್ಬಿಕೊಂಡಿವೆ. ‌

–ಲಿಂಗರಾಜು,ಸಂತೇಮರಹಳ್ಳಿ

ಸಮಸ್ಯೆಗಳಿಲ್ಲ

ತಾಲ್ಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳು ಸುಸ್ಥಿತಿಯಲ್ಲಿವೆ. ದುರಸ್ತಿಯಾಗಬೇಕಾದ ಕೊಠಡಿಗಳನ್ನು ಮುಚ್ಚಲಾಗಿದೆ. ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಕೋವಿಡ್ ಸೋಂಕು ಇಳಿದ ನಂತರ (ಫೆ.14) ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಮೊಟ್ಟೆ ಮತ್ತಿತರ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಕ್ರಮ ವಹಿಸಲಾಗಿದೆ.

– ಸೋಮಶೇಖರ್,

ಸಹಾಯಕ ನಿರ್ದೇಶಕ, ಮಹಿಳಾ, ಮಕ್ಕಳ ಅಭಿವೃದ್ಧಿಇಲಾಖೆ, ಯಳಂದೂರು

ಗುಣಮಟ್ಟದ ಆಹಾರ ಪೂರೈಕೆ

ಕಟ್ಟಡಗಳ ಸಮಸ್ಯೆ ಇರುವುದು ನಿಜ. ಕೆಲವು ಕಟ್ಟಡ ಕಾಮಗಾರಿ ಅರ್ಧದಲ್ಲೇ ನಿಂತಿವೆ. ಆಹಾರ ಕಳಪೆಯಾಗಿಲ್ಲ. ಗುಣಮಟ್ಟದ ಆಹಾರವನ್ನೇ ನೀಡಲಾಗುತ್ತಿದೆ.

–ಸುಜಾತ,ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ

ಕಟ್ಟಡ ನಿರ್ಮಾಣಕ್ಕೆ ಒತ್ತು: ಗೀತಾಲಕ್ಷ್ಮೀ

ಅಂಗನವಾಡಿ ಕೇಂದ್ರಗಳ ಸ್ಥಿತಿ ಸುಧಾರಣೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ‘ಪ್ರಜಾವಾಣಿ’ಗೆ ವಿವರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷ್ಮೀ ಅವರು, ‘ಜಿಲ್ಲೆಯಲ್ಲಿ 88 ಅಂಗನವಾಡಿ ಕಟ್ಟಡಗಳು ಶಿಥಿಲವಾಗಿವೆ. ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಖುದ್ದಾಗಿ ಅಂಗನವಾಡಿ ಸ್ಥಿತಿಗಳ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಗರ ಪ್ರದೇಶ ಸೇರಿದಂತೆ ಕೆಲವು ಕಡೆಗಳನ್ನು ನಮಗೆ ನಿವೇಶನದ ಸಮಸ್ಯೆ ಇದೆ. ಶಾಲೆಗಳಲ್ಲಿ ಖಾಲಿ ಇರುವ ಕೊಠಡಿಗಳನ್ನು ಗುರುತಿಸಿ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.20 ಕಟ್ಟಡಗಳು ಇಲಾಖೆಗೆ ಸಿಕ್ಕಿವೆ. 25 ಕಟ್ಟಡಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕಿದೆ. 20 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ’ ಎಂದರು.

ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಎಲ್ಲ ಅಂಗನವಾಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು ಎಂದು ಎಲ್ಲ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸ್ವತಃ ನಾನೂ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ರಾಜ್ಯ ಮಟ್ಟದಲ್ಲೇ ಆಹಾರ ಗುಣಮಟ್ಟದ ಬಗ್ಗೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಪ್ರಯೋಗಾಲಯದಲ್ಲಿ ಆಹಾರದ ಗುಣಮಟ್ಟ ಖಾತ್ರಿಯಾದ ಬಳಿಕವೇ ಸರಬರಾಜಾಗುತ್ತದೆ. ಇದಲ್ಲದೇ, ಯಾವಾಗ ಆಹಾರ ಸರಬರಾಜು ಮಾಡಲಾಗುತ್ತದೆ ಎಂದು ಈಗ ಮಾಧ್ಯಮ ಪ್ರಕಟಣೆಯನ್ನೂ ನೀಡುತ್ತಿದ್ದೇವೆ’ ಎಂದರು.

‘ಕೆಲವು ಕಡೆಯಿಂದ ದೂರು ಬಂದಿರುವುದು ನಿಜ. ಅದಕ್ಕೆ ಹವಾಮಾನ ಪರಿಸ್ಥಿತಿಯೂ ಕಾರಣವಿರಬಹುದು. ಅಂಗನವಾಡಿ ಕೇಂದ್ರಗಳಲ್ಲಿ ಬಂದ ದಾಸ್ತಾನಿನ ನಿರ್ವಹಣೆ ಸಮರ್ಪಕವಾಗಿಲ್ಲದಿದ್ದರೆ ಆಹಾರ ಪದಾರ್ಥಗಳು ಹಾಳಾಗಬಹುದು. ಪ್ಯಾಕಿಂಗ್‌ ದೋಷ ಇದ್ದರೂ ಸಮಸ್ಯೆ ಯಾಗುತ್ತದೆ. ಹೊಸ ದಾಸ್ತಾನು ಬಂತು ಎಂದು, ಹಳೆಯದನ್ನು ಹಾಗೆಯೇ ಇಟ್ಟರೆ, ಮುಂದೆ ಅದನ್ನು ವಿತರಿಸುವಾಗ ಸಹಜವಾಗಿ ಬೇಳೆ ಕಾಳುಗಳು ಹಾಳಾಗಿರುತ್ತವೆ’ ಎಂದು ವಿವರಿಸಿದರು.

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್‌ ಪ್ರಕಾಶ್‌, ಬಿ. ಬಸವರಾಜು, ಮಲ್ಲೇಶ ಎಂ. ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT