ಸಂತೇಮರಹಳ್ಳಿ: ಸಮೀಪದ ಕಣ್ಣೇಗಾಲ ಗ್ರಾಮದ ಸರ್ಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಹದಿ ಹರೆಯದವರ ಆರೋಗ್ಯ ದಿನಾಚರಣೆ ಈಚೆಗೆ ನಡೆಯಿತು.
ಮಕ್ಕಳ ತಜ್ಞೆ ಡಾ.ವರ್ಷಾ ಮಾತನಾಡಿ, ‘ಹದಿ ಹರೆಯದ ಮಕ್ಕಳು ಪ್ರೌಢಾವಸ್ಥೆ ಸಮಯದಲ್ಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಬಯಲು ಬಹಿರ್ದೆಸೆ ಬಳಸದೇ ಕಡ್ಡಾಯವಾಗಿ ಶೌಚಾಲಯ ಬಳಸಬೇಕು. ಊಟಕ್ಕೂ ಮೊದಲು ಮತ್ತು ಊಟದ ನಂತರ ಕೈಗಳನ್ನು ಚನ್ನಾಗಿ ತೊಳೆಯಬೇಕು. ಉತ್ತಮ ಯೋಚನೆಗಳೊಂದಿಗೆ ಮನಸ್ಸುಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಓದುವ ಸಮಯದಲ್ಲಿ ಓದಿಗಷ್ಟೇ ಸೀಮಿತವಾಗಿರಬೇಕು. ಬಾಲ್ಯ ವಿವಾಹಕ್ಕೆ ಒಳಗಾಗದೇ ವಿದ್ಯಾಭ್ಯಾಸವನ್ನು ಪೂರೈಸುವ ಕಡೆಗೆ ಗಮನ ಹರಿಸಬೇಕು. ಹೆಣ್ಣಿಗೆ 18 ಹಾಗೂ ಗಂಡಿಗೆ 21 ವರ್ಷ ತುಂಬಿದ ನಂತರ ಮದುವೆ ಮಾಡಬೇಕು. ಒಂದು ವೇಳೆ ಬಾಲ್ಯದಲ್ಲಿ ಮದುವೆ ಮಾಡಿದರೇ ಕಾನೂನಿನ ಪ್ರಕಾರ ಅಪರಾಧವಾಗಿ ಪೋಷಕರು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ತಿಳಿಸಿದರು.
ಡಾ.ಶಿವಕುಮಾರ್ ಮಾತನಾಡಿ, ‘ಹದಿ ಹರೆಯದ ವಯಸ್ಸಿನಲ್ಲಿ ನಡವಳಿಕೆ ಉತ್ತಮವಾಗಿರಬೇಕು. ಈ ವಯಸ್ಸಿನಲ್ಲಿ ಉತ್ತಮವಾಗಿ ಅಭ್ಯಾಸ ಮಾಡಿದಾಗ ಭವಿಷ್ಯ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜೀವನವನ್ನು ಬದಲಾಯಿಸಿಕೊಳ್ಳುವ ಸಮಯವಾಗಿರುತ್ತದೆ. ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಲು ಶಾಲೆ ಮತ್ತು ಮನೆಯಲ್ಲಿ ಒಳ್ಳೆಯ ಜೀವನ ನಡೆಸಬೇಕು’ ಎಂದು ತಿಳಿಸಿದರು.
ಗ್ರಾಮಪಂಚಾಯಿತಿ ಅಧ್ಯಕ್ಷ ಮಾದೇಶ್, ಸದಸ್ಯರಾದ ರಾಮನಾಯ್ಕ, ತಾಯಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ, ಸೌಮ್ಯ, ರಾಜೇಶ್, ಗೀತಾ, ಮುಖ್ಯಶಿಕ್ಷಕಿ ಸಿ.ಆರ್.ನಾಗಲಕ್ಷ್ಮಿ, ಶೋಭಾ, ಶ್ರೀಧರ್, ಮಧುಶ್ರೀ, ಮಹೇಶ್ವರಿ, ಆಶಾ ಕಾರ್ಯಕರ್ತೆಯರಾದ ಗಂಗೇಶ್ವರಿ, ಗಂಗಾಂಬಿಕೆ ಹಾಜರಿದ್ದರು.