ಚಾಮರಾಜನಗರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡಧ್ವಜ ಸುಟ್ಟು, ಮಹಾನ್ ಮಾನವತಾವಾದಿ ಬಸವಣ್ಣ ಅವರ ಭಾವಚಿತ್ರ ಹಾಗೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಎಂಇಎಸ್ ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾಪಡೆಯ ಕಾರ್ಯಕರ್ತರು ಶನಿವಾರವೂ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ಉದ್ಯಾನದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು, ಖಾಲಿ ಡಬ್ಬಿ ಹೊಡೆದು ಎಂಎಸ್ಇ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು ಮಾತನಾಡಿ, ‘ಎಂಇಎಸ್ ನಿಷೇಧಿಸುವಂತೆ ಎಂಟು ದಿನಗಳಿಂದ ನಗರದಲ್ಲಿ ಹೋರಾಟ ಮಾಡಲಾಗುತ್ತಿದೆ. ಆ ಸಂಘಟನೆಯು ಖಾಲಿ ಡಬ್ಬಕ್ಕೆ ಸಮಾನ. ಅದು ಅತ್ಯಂತ ಕೆಟ್ಟ ಸಂಘಟನೆ. ಅದನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು’ ಎಂದರು.
‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಎಂಇಎಸ್ ನಿಷೇಧ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿರುವುದು ನಾಚಿಗೇಡಿನ ಸಂಗತಿ. ಅವರು ಯಾವ ರಾಜ್ಯವನ್ನು ಪ್ರತಿನಿಧಿಸುತ್ತೀರಿ? ಅವರು ಎಂಇಎಸ್ ಏಜೆಂಟರೇ? ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಎಂಇಎಸ್ ನಿಷೇಧ ಮಾಡುವ ಶಕ್ತಿ ಅವರಿಗಿಲ್ಲವೇ? ಗೌರವ ಇದ್ದರೆ ಸಚಿವ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ರಾಜ್ಯ ಸರ್ಕಾರ ಕೂಡ ಎಂಇಎಸ್ ನಿಷೇಧಿಸಲು ಮೀನ ವೇಷ ಎಣಿಸುತ್ತಿದೆ. ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹಾಗು ಕನ್ನಡ ಪರ ಸಂಘಟನೆಗಳು ಡಿ. 31ರಂದು ಕರೆಕೊಟ್ಟಿರುವ ಕರ್ನಾಟಕ ಬಂದ್ಗೆ ಜಿಲ್ಲೆಯ ಕನ್ನಡಪರ ಸಂಘಟನೆ ಸಂಪೂರ್ಣ ಬೆಂಬಲವಿದೆ’ ಎಂದರು.
ಪ್ರತಿಭಟನೆಯಲ್ಲಿ ಚಾ.ವೆಂ.ರಾಜ್ ಗೋಪಾಲ್, ನಿಜಧ್ವನಿಗೋವಿಂದರಾಜು, ಶಿವಶಂಕರನಾಯಕ, ಚಾ.ರಾ.ಕುಮಾರ್ ಲಿಂಗರಾಜು, ಸಾಗರ್ ರಾವತ್, ನಂಜುಂಡ, ತಾಂಡವಮೂರ್ತಿ, ದೊರೆ ಇತರರು ಇದ್ದರು.