ಚಾಮರಾಜನಗರ: ಸೋಲಿಗರಿಗೂ ಕಾಡಿನ ಪಾರಂಪರಿಕ ಜ್ಞಾನ ಇದ್ದು ನಾಡಿನ ಕಡೆ ಕಾಡು ಕೂಡ ನಡೆದು ಬರುವಂತಾಗಲಿ ಎಂದು ದೀನಬಂಧು ಸಂಸ್ಥೆಯ ಗೌವರ ಕಾರ್ಯದರ್ಶಿ ಜಿ.ಎಸ್.ಜಯದೇವ ಸೋಮವಾರ ತಿಳಿಸಿದರು.
ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಜಡೇರುದ್ರಸ್ವಾಮಿ ನರ್ಸರಿಯಲ್ಲಿ ಅರಣ್ಯ ವೃಕ್ಷಗಳ ಬೀಜ ಸಂಗ್ರಹಿಸಿ ಅವುಗಳನ್ನು ಬೆಳೆಸುವ ವಿಶಿಷ್ಟ ವಿಧಾನವನ್ನು ಕರಗತ ಮಾಡಿಕೊಂಡಿರುವ ಬಂಗ್ಲೆಪೋಡಿನ ರಾಮೇಗೌಡರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
‘ರಾಮೇಗೌಡರು ಇದುವರೆವಗೂ ₹2 ಲಕ್ಷ ಸಸಿ ಮಾಡಿದ್ದಾರೆ. ಅವರ ನರ್ಸರಿಯಲ್ಲಿ ಅಪಾಯದ ಅಂಚಿನಲ್ಲಿರುವಂತಹ ಅಪರೂಪದ ಸಸ್ಯ ನಶಿಸಿಹೋಗದಂತೆ ಅವುಗಳ ಬೀಜಗಳಿಂದ ಸಸಿಗಳನ್ನು ಬೆಳೆಸಿ ನಾಡಿನ ವಿವಿಧ ಸಂಸ್ಥೆಗಳಿಗೆ ವಿತರಿಸಿದ್ದಾರೆ’ ಎಂದರು.
‘ರಾಮೇಗೌಡ ಅವರು ಅಪರೂಪದ 350ಕ್ಕೂ ಹೆಚ್ಚು ಗಿಡಗಳನ್ನು ಬೆಳಸಿದ್ದಾರೆ. ಇಂತಹವರನ್ನು ಗುರುತಿಸುವ, ಸನ್ಮಾನಿಸುವ ಕೆಲಸ ನಡೆಯಬೇಕು’ ಎಂದು ಹೇಳಿದರು.
ಬೆಂಗಳೂರಿನ ಭುವನೇಶ್ವರಿ ಚಾರಿಟಬಲ್ ಟ್ರಸ್ಟ್ನ ಎಚ್.ಆರ್.ರಾಜಶೇಖರ ರೆಡ್ಡಿ ಮಾತನಾಡಿ ‘ಬೆಂಗಳೂರಿನಲ್ಲಿ ನಾವು ಕೂಡ 2000 ಗಿಡಗಳನ್ನು ನೆಟ್ಟಿದ್ದೇವೆ. ನಗರ, ಪಟ್ಟಣ ಪ್ರದೇಶಗಳು ಕಾಂಕ್ರೀಟ್ ಮಯವಾಗಿದ್ದು, ಇಂದು ಸಮರ್ಪಕ ಗಾಳಿ, ನೀರು ಸಿಗದಂತಹ ವಾತಾವರಣ ಇಲ್ಲ’ ಎಂದು ತಿಳಿಸಿದರು.
ವೈಲ್ಡ್ ಲೈಫ್ ವಾರ್ಡನ್ ಮಲ್ಲೇಶಪ್ಪ ಮಾತನಾಡಿ, ‘ಅಳಿವಂಚಿನಲ್ಲಿರುವಂತಹ ಸಸ್ಯಗಳನ್ನು ಬೆಳೆಸುವಂತಹ ಕೆಲಸ ಮಾಡಬೇಕಾಗಿದೆ. ರಾಮೇಗೌಡರು ಇಂತಹ ನೂರಾರು ತರಹದ ವಿವಿಧ ಜಾತಿಯ ಗಿಡಗಳನ್ನು ಬೆಳೆಸುತ್ತಿದ್ದಾರೆ’ ಎಂದು ತಿಳಿಸಿದರು.
ಸನ್ಮಾನದ ಸಂದರ್ಭದಲ್ಲಿ ರಾಮೇಗೌಡರಿಗೆ ₹1 ಲಕ್ಷ ನಗದು ಬಹುಮಾನ ನೀಡಿ ಅವರ ಕಾರ್ಯವನ್ನು ಪ್ರೋತ್ಸಾಹಿಸಲಾಯಿತು.
ದೀನಬಂಧು ಸಂಸ್ಥೆಯ ಪ್ರಭು, ಕೇತನ್ ಬಿಳಿಗಿರಿರಂಗನ ಬೆಟ್ಟದ ಸಣ್ಣರಂಗೇಗೌಡ ಭಾಗವಹಿಸಿದ್ದರು.