ಕೊಳ್ಳೇಗಾಲ: ಇಲ್ಲಿನ ಕಾವೇರಿ ನೀರಾವರಿ ನಿಗಮದ ವಸತಿ ಗೃಹದ ಆವರಣದಲ್ಲಿಯ ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದುಕೊಂಡು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಶುಕ್ರವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಗ್ರಾಮದ ಅರ್ಜುನ್, ಶಿವು ಬಂಧಿತ ಆರೋಪಿಗಳು. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕಾರ್ಲಹಳ್ಳಿ ಗ್ರಾಮದ ನವೀನ್ ಕುಮಾರ್ ಪರಾರಿಯಾಗಿದ್ದಾನೆ. ಬೈಕ್, ಕೊಡಲಿ, ಗರಗಸ ಮತ್ತು ಮೂರು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ ತಡರಾತ್ರಿ 1.30 ರ ಸುಮಾರಿಗೆ ಕಳ್ಳರು ಶ್ರೀಗಂಧದ ಮರ ಕತ್ತರಿಸುತ್ತಿದ್ದಾರೆ ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಆರೋಪಿಗಳು ಶ್ರೀಗಂಧದ ಮರವನ್ನು ಕತ್ತರಿಸಿ ತುಂಡುಗಳನ್ನಾಗಿ ಮಾಡಿ ಚೀಲಗಳಿಗೆ ತುಂಬುತ್ತಿದ್ದಾಗ ಆರ್.ಎಫ್.ಒ ಪ್ರವೀಣ್ ರಾಮಪ್ಪ ಚಲವಾದಿ ನೇತೃತ್ವದ ತಂಡ ದಾಳಿ ನಡೆಸಿದೆ.