ಚಾಮರಾಜನಗರ: ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸಹೋದರರಿಬ್ಬರ ಅದೃಷ್ಟವನ್ನು ಟೊಮೆಟೊ ಬೆಳೆ ಬದಲಾಯಿಸಿದೆ. ಉತ್ತಮ ಬೆಲೆಯ ಕಾರಣಕ್ಕೆ ಅವರೀಗ ಲಕ್ಷಾಧೀಶರಾಗಿದ್ದು, ಶೀಘ್ರದಲ್ಲಿ ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಲಿದ್ದಾರೆ.
ಲಕ್ಷ್ಮೀಪುರದ ಕೃಷ್ಣಶೆಟ್ಟಿಯವರ ಪುತ್ರರಾದ ರಾಜೇಶ್ ಮತ್ತು ನಾಗೇಶ್ ಅವರು 12 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದು, ಎರಡು ಎಕರೆ ಪ್ರದೇಶದಲ್ಲಿ ಬೆಳೆದಿರುವ ಟೊಮೆಟೊ ಮಾರಾಟ ಮಾಡಿದ್ದಾರೆ. ಅಂದಾಜು ₹40 ಲಕ್ಷದಷ್ಟು ಆದಾಯ ಬಂದಿದೆ. ಬಂದ ಹಣದಲ್ಲಿ ಸಾಲ ತೀರಿಸಿರುವುದರ ಜೊತೆಗೆ, ದುಬಾರಿ ವಾಹನವೊಂದನ್ನು ಖರೀದಿಸಲೂ ಅವರು ಮುಂದಾಗಿದ್ದಾರೆ.
‘ಬಂದ ಹಣದಲ್ಲಿ ಬೆಳೆಗಾಗಿ ಮಾಡಿದ್ದ ಸಾಲ, ರಸಗೊಬ್ಬರದ ಬಾಕಿ ಹಣವನ್ನು ಪಾವತಿ ಮಾಡಿದ್ದು, ಒಂದು ಎಸ್ಯುವಿಯನ್ನೂ (ಮಹೀಂದ್ರಾ ಎಕ್ಸ್ಯುವಿ 700) ಖರೀದಿಸಲು ಮುಂಗಡ ಪಾವತಿಸಿದ್ದೇವೆ’ ಎಂದು ರಾಜೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಎಸ್ಸೆಸ್ಸೆಲ್ಸಿವರೆಗೆ ಓದಿರುವ ರಾಜೇಶ್ ಮತ್ತು ನಾಗೇಶ್ ಮೂರು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಟೊಮೆಟೊ ಬೆಳೆಗೆ ಒತ್ತು ನೀಡುತ್ತಿದ್ದಾರೆ.
ಈ ಬಾರಿ ತಮ್ಮ ಎರಡು ಎಕರೆ ಜಮೀನು ಮಾತ್ರವಲ್ಲದೇ ಸುತ್ತಮುತ್ತಲಿನಲ್ಲಿರುವ 10 ಎಕರೆ ಜಮೀನನ್ನು ಗುತ್ತಿಗೆ ಪಡೆದು ಟೊಮೆಟೊ ಬೆಳೆ ಬೆಳೆದಿದ್ದಾರೆ.
‘ಎರಡೂವರೆ ತಿಂಗಳ ಹಿಂದೆ 50 ಸಾವಿರ ಟೊಮೆಟೊ ಗಿಡಗಳನ್ನು ಹಾಕಿದ್ದೇವೆ. ಫಸಲು ಈಗ ಬರುತ್ತಿದೆ. ಕೆಜಿಗೆ ₹100, ₹90, ₹85 ಹೀಗೆ ವಿವಿಧ ಬೆಲೆಗೆ ಮಾರಾಟ ಮಾಡಿದ್ದೇವೆ. ತಮಿಳುನಾಡಿನ ವ್ಯಾಪಾರಿಗಳು ಬಂದು ಜಮೀನಿಂದಲೇ ಖರೀದಿಸುತ್ತಿದ್ದಾರೆ. ಇನ್ನೂ 50 ಟನ್ಗಳಷ್ಟು ಫಸಲು ಬರುವುದಿದೆ. ಈಗ ಬೆಲೆ ಸ್ವಲ್ಪ ಕಡಿಮೆ ಇದೆ. ಈಗಿನ ಬೆಲೆ ಲೆಕ್ಕಹಾಕಿದರೂ ₹50ರಿಂದ ₹60 ಲಕ್ಷ ಬರಬಹುದು’ ಎಂದು ರಾಜೇಶ್ ಹೇಳಿದರು.
12 ಎಕರೆ ಟೊಮೆಟೊ ಕಾಯುವುದೇ ಈ ಕುಟುಂಬಕ್ಕೆ ದೊಡ್ಡ ಸವಾಲಾಗಿದೆ.
‘ರಾತ್ರಿ ಹಗಲು ಜಮೀನಿನಲ್ಲೇ ಇರುತ್ತೇವೆ. ಕಾವಲು ಇಲ್ಲದಿದ್ದರೆ, ಯಾರಾದರೂ ಟೊಮೆಟೊ ಕಿತ್ತುಕೊಂಡು ಹೋಗುವ ಸಾಧ್ಯತೆ ಇದೆ. ಈ ಬಾರಿ ಟೊಮೆಟೊ ಬೆಳೆಯಿಂದಾಗಿ ಒಂದಷ್ಟು ಆದಾಯ ನೋಡುವಂತಾಗಿದೆ. ಮೊದಲಿನ ಬೆಲೆಯೇ ಇದ್ದಿದ್ದರೆ, ಕೆಲವು ಕೋಟಿಗಳಷ್ಟು ಆದಾಯ ಬರುತ್ತಿತ್ತು’ ಎಂದು ರಾಜೇಶ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.