ಚಾಮರಾಜನಗರ: ತಾಲ್ಲೂಕಿನ ಹೆಬ್ಬಸೂರಿಗೆ ಕೆಎಸ್ಆರ್ಟಿಸಿ ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ ಗ್ರಾಮದ ವಿದ್ಯಾರ್ಥಿಗಳು ಹಾಗೂ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಹಿಡಿಯಲು ವಿದ್ಯಾರ್ಥಿಗಳು ಗ್ರಾಮದಿಂದ ಚಂದಕವಾಡಿವರೆಗೆ ಪ್ರತಿ ದಿನ ಐದು ಕಿ.ಮೀ ನಡೆಯಬೇಕಾಗಿದೆ.
ಕೋವಿಡ್ ಹಾವಳಿ ಆರಂಭಕ್ಕೂ ಮುನ್ನ ಬೆಳಿಗ್ಗೆ ಹಾಗೂ ಸಂಜೆ ಕೆಎಸ್ಆರ್ಟಿಸಿ ಬಸ್ ಗ್ರಾಮಕ್ಕೆ ಬರುತ್ತಿತ್ತು. ಲಾಕ್ಡೌನ್ ನಂತರ ಬಸ್ ಸೇವೆ ಸ್ಥಗಿತಗೊಂಡಿದೆ. ಈಗ ಪರಿಸ್ಥಿತಿ ಎಲ್ಲ ತಿಳಿಯಾಗಿ ಶಾಲಾ ಕಾಲೇಜುಗಳು ಆರಂಭವಾಗಿವೆ. ಎಲ್ಲ ಚಟುವಟಿಕೆಗಳು ನಡೆಯುತ್ತಿವೆ. ಜನರ ಓಡಾಟವೂ ಸಹಜ ಸ್ಥಿತಿಗೆ ಬಂದಿದೆ. ಹಾಗಿದ್ದರೂ, ಬಸ್ ಸೇವೆ ಪುನರಾರಂಭವಾಗಿಲ್ಲ.
ಗ್ರಾಮದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ನಗರದ ವಿವಿಧ ಶಾಲೆ ಕಾಲೇಜುಗಳಿಗೆ ಬರುತ್ತಾರೆ. ಗ್ರಾಮದಿಂದ ನಗರಕ್ಕೆ ಬರುವ ಆಟೊದವರು ಒಬ್ಬರಿಗೆ ₹30 ತೆಗೆದುಕೊಳ್ಳುತ್ತಾರೆ. ಬಸ್ ಪುನರಾರಂಭವಾಗಬಹುದು ಎಂಬ ನಿರೀಕ್ಷೆಯಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಪಾಸ್ ಕೂಡ ಮಾಡಿಸಿದ್ದಾರೆ. ಆಟೊಗಳಿಗೆ ಹಣ ನೀಡಲು ಶಕ್ತಿ ಇಲ್ಲದ ವಿದ್ಯಾರ್ಥಿಗಳು ಹೆಬ್ಬಸೂರಿನಿಂದ ಚಂದಕವಾಡಿವರೆಗೆ ಐದು ಕಿ.ಮೀ ನಡೆದುಕೊಂಡು ಬರುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಸೇರಿ 10 ಕಿ.ಮೀ ನಡೆಯುತ್ತಿದ್ದಾರೆ.
ಕೆಎಸ್ಆರ್ಟಿಸಿಅಧಿಕಾರಿಗಳಿಗೆ ಗ್ರಾಮಸ್ಥರು ಎರಡು ತಿಂಗಳ ಹಿಂದೆಯೇ ಬಸ್ ಸೇವೆ ಪುನರಾರಂಭಿಸುವಂತೆ ಮನವಿ ಮಾಡಿದ್ದಾರೆ. ಹಾಗಿದ್ದರೂ, ಅಧಿಕಾರಿಗಳು ಸ್ಪಂದಿಸಲ್ಲ ಎಂಬುದು ಗ್ರಾಮಸ್ಥರ ಆರೋಪ. ‘ಇಂದು, ನಾಳೆ ಎಂದು ಹೇಳುತ್ತಾ ವಿಳಂಬ ಮಾಡುತ್ತಿದ್ದಾರೆ’ ಎಂಬುದು ಅವರ ದೂರು.
‘ಗ್ರಾಮದಲ್ಲಿ ಬಡ ಕುಟುಂಬದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಟೊದವರು ಒಮ್ಮೆಗೆ ₹30 ಕೇಳುತ್ತಾರೆ. ದಿನಕ್ಕೆ ₹60 ವೆಚ್ಚ ಮಾಡಿ ಶಾಲೆಗೆ ಹೋಗುವ ಶಕ್ತಿ ವಿದ್ಯಾರ್ಥಿಗಳಿಲ್ಲ. ಹೆಣ್ಣು ಮಕ್ಕಳ ಸಹಿತ ಎಲ್ಲ ವಿದ್ಯಾರ್ಥಿಗಳು ಅನಿವಾರ್ಯವಾಗಿ ಐದು ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ. ಹಿಂದೆ ಬೆಳಿಗ್ಗೆ 8.30ಕ್ಕೆ ಹಾಗೂ ಸಂಜೆ 4.30ಕ್ಕೆ ಚಾಮರಾಜನಗರದಿಂದ ನಮ್ಮ ಊರಿಗೆ ಕೆಎಸ್ಆರ್ಟಿಸಿ ಬಸ್ ಬರುತ್ತಿತ್ತು. ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರಿಗೆ ಅನುಕೂಲವಾಗುತ್ತಿತ್ತು. ಕೋವಿಡ್ ನಂತರ ಸ್ಥಗಿತಗೊಂಡ ಸೇವೆ ಮತ್ತೆ ಆರಂಭವಾಗಿಲ್ಲ’ ಎಂದು ಗ್ರಾಮದ ಕಾರ್ತಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರಾಮಸ್ಥರೆಲ್ಲ ಸೇರಿ ಎರಡು ತಿಂಗಳ ಹಿಂದೆಯೇ ಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಮಾಡಿದ್ದೆವು. ಬಸ್ ಹಾಕುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಹಾಕಿಲ್ಲ. ಅಧಿಕಾರಿಗಳನ್ನು ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.
‘ಮನವಿ ನೀಡಿದರೆ ಕ್ರಮ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು, ‘ಹೆಬ್ಬಸೂರಿನ ಗ್ರಾಮಸ್ಥರು ನನಗೆ ಕರೆ ಮಾಡಿ ಗಮನಕ್ಕೆ ತಂದಿದ್ದಾರೆ. ಎಷ್ಟು ಗಂಟೆಗೆ ಬಸ್ ಹಾಕಬೇಕು ಎಂಬುದನ್ನು ಉಲ್ಲೇಖಿಸಿ ಮನವಿ ನೀಡುವಂತೆ ಹೇಳಿದ್ದೇನೆ. ಊರಿನವರು ಮನವಿ ನೀಡಿದರೆ, ಬಸ್ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.