ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕುಂತೂರಿನ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕೊಳ್ಳೇಗಾಲದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಿಂದ ಚಾಮರಾಜನಗರ ಜಿಲ್ಲಾಡಳಿತ ಭವನದವರೆಗೆ ಬೈಕ್ ರ್ಯಾಲಿ ನಡೆಸಿದ ರೈತರು ಭವನದ ಮುಂಭಾಗ ಧರಣಿ ನಡೆಸಿದರು.
‘ರೈತರ ಶ್ರಮಕ್ಕೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಬೆಲೆ ಕೊಡುತ್ತಿಲ್ಲ. ಉದ್ಧಟತನದ ವರ್ತನೆ ತೋರುತ್ತಿದ್ದಾರೆ. ಆಡಳಿತ ಮಂಡಳಿ ಉಪಾಧ್ಯಕ್ಷ ಶರವಣ ಮತ್ತು ಕಬ್ಬು ಅಭಿವೃದ್ಧಿ ಅಧಿಕಾರಿ ಮಹಾದೇವಪ್ಪ ಅವರನ್ನು ಕಾರ್ಖಾನೆಯಿಂದ ವರ್ಗಾವಣೆ ಮಾಡಬೇಕು’ ಎಂದು ಆರೋಪಿಸಿದರು.
‘ಇತ್ತೀಚೆಗೆ ಕಾರ್ಖಾನೆ ಕಾರ್ಮಿಕರು ಮುಷ್ಕರ ಹೂಡಿದ್ದಾಗ ರೈತರ ಕಬ್ಬನ್ನು ಅರೆಯದೇ ಹಾಗೆಯೇ ಬಿಡಲಾಗಿತ್ತು. ಇದರಿಂದ ಬೆಳೆಗಾರರಿಗೆ ನಷ್ಟವಾಗಿದ್ದು, ನಷ್ಟವನ್ನು ತುಂಬಿಕೊಡಬೇಕು. 14 ತಿಂಗಳ ಅವಧಿ ಮೀರಿದರೂ ಕಾರ್ಖಾನೆಯು ಕಬ್ಬು ಕಟಾವು ಮಾಡುತ್ತಿಲ್ಲ. ಇದರಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ರೈತರ ಜಮೀನಿನಲ್ಲಿ ಒಣಗುತ್ತಿರುವ ಕಬ್ಬಿಗೆ ವೈಜ್ಞಾನಿಕವಾಗಿ ನಷ್ಟ ತುಂಬಿಕೊಡಬೇಕು. ಕಟಾವು ವೆಚ್ಚವನ್ನು ವರ್ಷದ ಎಲ್ಲ ತಿಂಗಳು ಸಾಮಾನವಾಗಿ ನಿಗದಿಪಡಿಸಬೇಕು. ಸರ್ಕಾರ ನಿಗದಿ ಮಾಡಿದ ಟನ್ ಕಬ್ಬಿಗೆ ₹150 ಬಾಕಿ ಹಣವನ್ನು ಈ ಕೂಡಲೇ ಪಾವತಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸ್ಥಳಕ್ಕೆ ಭೇಟಿ ನೀಡಿ, ಕಬ್ಬು ಬೆಳೆಗಾರರ ಅಹವಾಲು ಆಲಿಸಿದರು.
‘ಇದೇ ವಿಚಾರವಾಗಿ ಮಂಗಳವಾರ ಆಡಳಿತಮಂಡಳಿ, ಅಧಿಕಾರಿಗಳು ಹಾಗೂ ರೈತರ ಸಭೆ ಕರೆಯಲಾಗಿದ್ದು, ಅಲ್ಲಿ ಚರ್ಚಿಸೋಣ. ಸಭೆಗೆ ನೀವೂ ಬನ್ನಿ. ಈಗ ಪ್ರತಿಭಟನೆ ಕೈಬಿಡಿ’ ಎಂದು ಜಿಲ್ಲಾಧಿಕಾರಿ ಹೇಳಿದರೂ ಪ್ರತಿಭಟನಕಾರರು ಕೇಳಲಿಲ್ಲ. ಪ್ರತಿಭಟನೆ ಮುಂದುವರಿಸಿದರು.
ಮುಖಂಡರಾದ ಕುಂತೂರು ನಂಜುಂಡಸ್ವಾಮಿ, ಲೋಕೇಶ್, ಮಹದೇವಸ್ವಾಮಿ, ಶಿವಸ್ವಾಮಿ, ವಿಷಕಂಠೆಗೌಡ, ನಾಗರಾಜು, ಬಾಬು ಪಾಷ, ತೇಜಸ್, ಜವರನಾಯ್ಕ, ಸುಬ್ಬಣ್ಣ, ಮಹದೇವಪ್ಪ, ಶ್ರೀಕಂಠಸ್ವಾಮಿ ಇತರರು ಇದ್ದರು.