ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಹಕರ ಕಾಯ್ದೆಗಳ ಅರಿವು ಮುಖ್ಯ: ಶ್ರೀಧರ

ವಿಶ್ವ ಗ್ರಾಹಕರ ದಿನಾಚರಣೆ: ವಸ್ತುಗಳ ಖರೀದಿಯಲ್ಲಿ ಮೋಸ ಹೋಗದಿರಲು ಸಲಹೆ
Published 20 ಮಾರ್ಚ್ 2024, 16:01 IST
Last Updated 20 ಮಾರ್ಚ್ 2024, 16:01 IST
ಅಕ್ಷರ ಗಾತ್ರ

ಚಾಮರಾಜನಗರ: ಗ್ರಾಹಕರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಗ್ರಾಹಕರ ಹಕ್ಕುಗಳ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಅವರು ಬುಧವಾರ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರವು 1986ರಲ್ಲಿ ಗ್ರಾಹಕ ಹಕ್ಕುಗಳ ಕಾಯ್ದೆ ಜಾರಿಗೊಳಿಸಿದೆ. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಗ್ರಾಹಕರೇ. ಗ್ರಾಹಕರಿಗೆ ನ್ಯಾಯಯುತ, ಯೋಗ್ಯ ಹಾಗೂ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ನೀಡುವ ಜವಾಬ್ದಾರಿ ವ್ಯಾಪಾರಸ್ಥರದ್ದು. ಯಾವುದೇ ವಸ್ತುಗಳನ್ನು ಕೊಡುವವನ ತೃಪ್ತಿಗಾಗಿ ಕೊಳ್ಳುವುದಲ್ಲ, ಅಲ್ಲಿ ಗ್ರಾಹಕರ ಸಂತೃಪ್ತಿಯೇ ಮುಖ್ಯ. ಸುರಕ್ಷತೆ, ಆಯ್ಕೆ ಹಾಗೂ ಆರೋಗ್ಯಪೂರ್ಣ ಪರಿಸರ ಹೊಂದುವ ಹಕ್ಕನ್ನು ಕಾಯ್ದೆಯು ಎಲ್ಲ ಗ್ರಾಹಕರಿಗೂ ನೀಡಿದೆ’ ಎಂದರು.

‘ವ್ಯಾಪಾರಸ್ಥರು ವಸ್ತುಗಳಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ದರ ಪಡೆಯುವಂತಿಲ್ಲ. ವಸ್ತುಗಳು ದೋಷದಿಂದ ಕೂಡಿದ್ದರೆ ಪ್ರಶ್ನೆ ಮಾಡುವ ಹಕ್ಕು ಗ್ರಾಹಕರಿಗಿದೆ. ಅವಧಿ ಮೀರಿದ ಉತ್ಪನ್ನಗಳನ್ನು ನೀಡಿದರೆ ಅಂತಹವರ ಮೇಲೆ ಗ್ರಾಹಕರ ಆಯೋಗದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆಯಬಹುದು. ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದಲ್ಲಿ ₹50 ಲಕ್ಷದವರೆಗೆ ಹಾಗೂ ರಾಜ್ಯ ಆಯೋಗದಲ್ಲಿ ₹1 ಕೋಟಿಯವರೆಗೆ ಪರಿಹಾರ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳನ್ನು ಅರಿಯಬೇಕು’ ಎಂದು ಶ್ರೀಧರ ತಿಳಿಸಿದರು.

ಲೋಕಸಭಾ ಚುನಾವಣೆಯ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ‘ಗ್ರಾಹಕರ ಹಕ್ಕುಗಳ ಜಾಗೃತಿ ಎಲ್ಲರಿಗೂ ಅಗತ್ಯ. ಅದರಲ್ಲೂ ಕುಟುಂಬ ನಿರ್ವಹಿಸುವ ಮಹಿಳೆಯರಿಗೆ ಅತ್ಯಗತ್ಯ. ವಸ್ತುಗಳನ್ನು ಕೊಳ್ಳುವಾಗ ತೂಕ, ಅಳತೆ ಮತ್ತು ದರ ಕ್ರಮಬದ್ದವಾಗಿರಬೇಕು. ಗ್ರಾಹಕರು ಅದನ್ನು ಪರೀಕ್ಷಿಸಿ ಪಡೆದುಕೊಳ್ಳಬೇಕೇ ವಿನಾ ಮೋಸ ಹೋಗಬಾರದು’ ಎಂದರು.

‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನರನ್ನು ಆಕರ್ಷಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ಪ್ರತಿ ತಾಲ್ಲೂಕಿಗೆ ತಲಾ ಎರಡು ಸಖೀ ಸೌರಭ ಮತಗಟ್ಟೆ, ಜಾನಪದ ಕಲಾ ಶೈಲಿಯ ಮತಗಟ್ಟೆ, ಅರಣ್ಯದ ಮಹತ್ವ ತಿಳಿಸುವ ಹಸಿರು ಮತಗಟ್ಟೆ ಹಾಗೂ ರೈತರನ್ನು ಸೆಳೆಯಲು ಅನ್ನದಾತರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷೆ ಎಂ.ವಿ.ಭಾರತಿ ಮಾತನಾಡಿ, ‘ಇಂದಿನ ದಿನಗಳಲ್ಲಿ ಸಾಕಷ್ಟು ಜನರು ವ್ಯಾಪಾರಕ್ಕಾಗಿ ಆನ್‌ಲೈನ್ ಮೊರೆ ಹೋಗುತ್ತಿರುವುದನ್ನು ಕಾಣಬಹುದು. ಅಂಗಡಿಗಳಿಂದ ವಸ್ತುಗಳನ್ನು ಕೊಳ್ಳುವುದಷ್ಟೇ ಅಲ್ಲ. ಬ್ಯಾಂಕಿಂಗ್ ಹಾಗೂ ವಿಮಾ ಸೌಲಭ್ಯಗಳನ್ನು ಪಡೆಯುವಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಈ ಬಾರಿಯ ಗ್ರಾಹಕರ ದಿನವನ್ನು ‘ಗ್ರಾಹಕರಿಗಾಗಿ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ದಿಮತ್ತೆ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ’ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಸದಸ್ಯ ಕೆ.ಎಸ್.ರಾಜು ಕಾರ್ಯಕ್ರಮದಲ್ಲಿ ಗ್ರಾಹಕರ ಹಕ್ಕುಗಳ ಕುರಿತು ಮಾತನಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಸವಿತಾ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಬಿ.ಎನ್.ರಾಜೀವ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕ ಬಾಲಕೃಷ್ಣ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಸಂಯೋಜಕಿ ಹಾಗೂ ಶ್ರೀಗಂಧ ಮಹಿಳಾ ಅಭಿವೃದ್ಧಿ ಸಂಘದ ಶಿವರಾಜಮ್ಮ, ಇತರರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT