ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ

ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ 15 ಗ್ರಾಮಗಳು ಆಯ್ಕೆ
Last Updated 1 ಅಕ್ಟೋಬರ್ 2020, 8:34 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 15 ಗ್ರಾಮಗಳು ಆಯ್ಕೆಯಾಗಿವೆ. ಒಂದು ಗ್ರಾಮದಲ್ಲಿ ಮೊದಲ ಹಂತದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.

ಅಕ್ಟೋಬರ್ 2 ರಂದು ಯೋಜನೆಗೆ ಚಾಲನೆ ದೊರೆಯಲಿದೆ. 2018-19 ರಲ್ಲಿ ಒಂದು ಗ್ರಾಮ , 2019-20 ರಲ್ಲಿ 4 ಗ್ರಾಮಗಳು ಹಾಗೂ 2020-21 ರಲ್ಲಿ 3 ಗ್ರಾಮಗಳನ್ನು ಆಯ್ಕೆಯಾಗಿದ್ದವು. ಈಗ ಮತ್ತೆ ಹೆಚ್ಚುವರಿಯಾಗಿ 7 ಗ್ರಾಮಗಳು ಆಯ್ಕೆಯಾಗಿವೆ.

ಮೊದಲ ಕಂತಿನಲ್ಲಿ 20 ಲಕ್ಷ ಬಿಡುಗಡೆಯಾಗಿದ್ದು,ಈಗಾಗಲೇ ಕ್ರಿಯಾಯೋಜನೆ ರೂಪಿಸಿ ಹಣ ಹಂಚಿಕೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯು ಗ್ರಾಮಗಳ ಆಯ್ಕೆ, ಅನುದಾನ ಬಿಡುಗಡೆ, ಕಾಮಗಾರಿಗಳು ಕ್ರಿಯಾಯೋಜನೆಯ ಅನುಮೋದನೆ, ಅನುಷ್ಠಾನ ಸಂಸ್ಥೆಗಳನ್ನು ಗುರುತಿಸುವುದು, ಮೇಲ್ವಿಚಾರಣೆ, ಪರಿಶೀಲನೆಯ ಕರ್ತವ್ಯ ನಿರ್ವಹಿಸುತ್ತದೆ.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಕಾರ್ಯದರ್ಶಿಯಾಗಿರುತ್ತಾರೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಪರಿಶಿಷ್ಟಜಾತಿಯ ಸದಸ್ಯರ ಅಧ್ಯಕ್ಷತೆಯನ್ನು ಸ್ಥಳೀಯ ಸಮಿತಿಯಾಗಿ ನೇಮಿಸಲಾಗುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿಯಾಗಿರುತ್ತಾರೆ. ಗ್ರಾಮ ಮಟ್ಟದಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಜಿಲ್ಲಾ ಸಮಿತಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದನಾರಾಯಣಸ್ವಾಮಿ ತಿಳಿಸಿದರು.

ಆಯ್ಕೆಯಾದ ಗ್ರಾಮಗಳಲ್ಲಿನ ಜಾತಿವಾರು ಜನಸಂಖ್ಯೆ, ಶಾಲೆ, ಅಂಗನವಾಡಿ, ರಸ್ತೆ, ಚರಂಡಿ, ಬೀದಿ ದೀಪಗಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು, ಅಂಗವಿಕಲರು, ಸಾಮಾಜಿಕ ಭದ್ರತೆಯ ವೃದ್ಧಾಪ್ಯ ವೇತನಕ್ಕೆ ಅರ್ಹತೆಯುಳ್ಳವರು ಸೇರಿದಂತೆ ಸಂಪೂರ್ಣವಾಗಿ ಸಮೀಕ್ಷೆ ನಡೆಸಲಾಗುತ್ತದೆ. ಈ ಯೋಜನೆಯಡಿ ಶಾಲೆಯ ಅವಶ್ಯಕತೆ, ಶಾಲೆ ಬಿಟ್ಟ ಮಕ್ಕಳ ಕುರಿತು ಶಿಕ್ಷಣ ಇಲಾಖೆಗೆ ಮಾಹಿತಿ ರವಾನೆ. ರಸ್ತೆ, ಚರಂಡಿ, ಕುಡಿಯುವ ನೀರು ಮುಂತಾದ ಮೂಲಭೂತ ಸೌಲಭ್ಯಗಳ ಕುರಿತು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ರಮಕೈಗೊಳ್ಳಿದೆ. ಇನ್ನುಸಾಮಾಜಿಕ ಭದ್ರತೆಯ ವೃದ್ಧಾಪ್ಯ ವೇತನದ ಜವಬ್ದಾರಿಯನ್ನು ಕಂದಾಯ ಇಲಾಖೆಗೆ ವಹಿಸಲಾಗುತ್ತದೆ.

ಪರಿಶಿಷ್ಟಜಾತಿ,ಪಂಗಡಗಳಿಗೆ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳು ಅಗತ್ಯವುಳ್ಳವರಿಗೆ ತಲುಪಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ. ಪರಿಶಿಷ್ಟ ಜಾತಿ,ಪಂಗಡದ ಜನರು ಹೆಚ್ಚಾಗಿರುವ ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಗೊಳಿಸಲಾಗುವುದು. ಗ್ರಾಮಗಳಲ್ಲಿ ವಿವಿಧ ಯೋಜನೆಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಗುರುತಿಸಿ, ಅವುಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗುವುದು.

ಒಟ್ಟಾರೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೊಳಿಸುವುದು ಪ್ರಧಾನ ಮಂತ್ರಿಆದರ್ಶ ಗ್ರಾಮದ ಉದ್ದೇಶವಾಗಿದೆ. ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಜಂಟಿಯಾಗಿ ಕ್ರಿಯಾಯೋಜನೆಯನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತದೆ.

ಸೌಲಭ್ಯಗಳ ಅಗತ್ಯವಿರುವ ಎಲ್ಲರಿಗೂ ಸೌಲಭ್ಯಗಳನ್ನು ತಲುಪಿಸುವುದು. ಸರ್ಕಾರಿ ನಿಯಮಗಳಂತೆ ಸೌಲಭ್ಯಗಳಿಗೆ ಅರ್ಹತೆ ಹೊಂದಿರುವ ಯಾರೊಬ್ಬರೂ ಸೌಲಭ್ಯಗಳಿಂದ ವಂಚಿತರಾಗದಂತೆ ಇಲಾಖೆಗಳ ಅಧಿಕಾರಿಗಳು ಮೇಲ್ವಿಚಾರಣೆ ವಹಿಸುತ್ತಾರೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ತಿಳಿಸಿದರು.

ಆಯ್ಕೆಯಾಗಿರುವ ಗ್ರಾಮಗಳು: ನಾರಾಯಣಹಳ್ಳಿ, ಗಾಜಲಹಳ್ಳಿ, ರಾಂಪುರ, ಸೀತಾರಾಂಪುರ, ಗೋನೇಹಳ್ಳಿ, ನಂದನಹೊಸಹಳ್ಳಿ, ಶೆಟ್ಟಿನಾಯಕನಹಳ್ಳಿ, ತುಳವನೂರು,ಗೌಡನಹಳ್ಳಿ, ಗೋಡನಮರಿ, ಮುಂತಕದಿರೇನಹಳ್ಳಿ, ದೇವಗಾನಹಳ್ಳಿ, ಕದಿರೇನಹಳ್ಳಿ, ಚೌಡದೇನಹಳ್ಳಿ,ಯಾರ ಕೋಟ ಗ್ರಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT